ಚಿಕ್ಕೋಡಿ : ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಸೋಲಲಿದ್ದಾರೆ. ಹಾಗಾಗಿ ಯಡಿಯೂರಪ್ಪ ಕೈ ಬಲಪಡಿಸುವ ಸಲುವಾಗಿ ಕೆಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾಗಿ ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಹೇಳಿದ್ದಾರೆ.
ಅಥಣಿ ಮಿನಿ ವಿಧಾನಸೌಧದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯಾಗಿರುವ ವಿನಾಯಕ ಮಠಪತಿ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಪದ್ಮನಾಭ ಪ್ರಸನ್ನ, ಅಥಣಿ ಮತಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ವಿನಾಯಕ ಮಠಪತಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಇವರು ಬಿಜೆಪಿಗೆ ಸೆಡ್ಡು ಹೊಡೆಯಲಿದ್ದಾರೆ. ಪ್ರವಾಹ ಸಂತ್ರಸ್ಥರಾಗಿರುವ ವಿನಾಯಕ ಮಠಪತಿ ಕೆಜೆಪಿ ಅಭ್ಯರ್ಥಿಯಾಗಿದ್ದು, ಐವತ್ತು ಸಾವಿರ ಮತಗಳಿಂದ ಅವರು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗುಪ್ತಚರ ಮಾಹಿತಿ ಪ್ರಕಾರ ಬಿಜೆಪಿ ಉಪ ಚುನಾವಣೆಯಲ್ಲಿ 5ರಿಂದ 6 ಸೀಟು ಗೆಲ್ಲಲಿದೆ. ನಮ್ಮ ಕೆಜೆಪಿ ಪಕ್ಷ ಅಥಣಿ ಹಾಗೂ ಹಿರೇಕೆರೂರು ಕ್ಷೇತ್ರದಲ್ಲಿ ಗೆಲ್ಲಲಿದೆ. ಯಡಿಯೂರಪ್ಪ ಸರ್ಕಾರಕ್ಕೆ ಕಡಿಮೆಯಾಗುವ ಎರಡು ಸೀಟುಗಳನ್ನು ನಾವು ತುಂಬುತ್ತೇವೆ ಎಂದು ಅವರು ಹೇಳಿದರು.
ಈ ಹಿಂದೆ ನಿಮಗೂ ಯಡಿಯೂರಪ್ಪನಿಗೂ ಅಸಮಾಧಾನವಿತ್ತು ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅದೆಲ್ಲಾ ಹಳೆ ವಿಚಾರ, ಯಡಿಯೂರಪ್ಪನಿಗೆ ತಂದೆಯ ಸ್ಥಾನ ನೀಡಿದ್ದೇನೆ. ಇವತ್ತು ನಾನೆನಿದ್ದೇನೋ ಅದು ಯಡಿಯೂರಪ್ಪ ನೀಡಿದ ಭಿಕ್ಷೆ ಎಂದರು.