ಬೆಳಗಾವಿ: ಕಳೆದ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಪ್ರವಾಹದಿಂದ ಮನೆ ಕಳೆದುಕೊಂಡಿದ್ದ ಸಂತ್ರಸ್ತರನ್ನು ರಾಮದುರ್ಗ ತಾಲೂಕು ಆಡಳಿತ ಬೀದಿಗೆ ತಳ್ಳಿದೆ.
ರಾಮದುರ್ಗ ತಾಲೂಕಿನ ಸಂಗಳ ಗ್ರಾಮಸ್ಥರು 2019ರಲ್ಲಿ ನೆರೆ ಪ್ರವಾಹಕ್ಕೆ ಸಿಕ್ಕು ಮನೆಗಳನ್ನ ಕಳೆದುಕೊಂಡಿದ್ದರು. ಆಗ ಮಾರಡಗಿ ಗ್ರಾಮದಲ್ಲಿ ನಿರ್ಮಿಸಿದ್ದ ಆಶ್ರಯ ಮನೆಗಳಿಗೆ ಸ್ಥಳಾಂತರ ಮಾಡಲಾಗಿತ್ತು.
ತಗಡಿನ ಶೆಡ್ ನಿರ್ಮಿಸಿ ಕೊಡುವವರೆಗೆ ವಸತಿ ಗೃಹಗಳಲ್ಲಿ ಇರುವಂತೆ ರಾಮದುರ್ಗ ತಾಲೂಕು ಆಡಳಿತ ಹೇಳಿತ್ತು. ಎರಡು ವರ್ಷ ಕಳೆದರೂ ಶೆಡ್ ನಿರ್ಮಿಸದ ತಾಲೂಕು ಆಡಳಿತ ಇದೀಗ ವಸತಿಗೃಹ ಖಾಲಿ ಮಾಡಿಸಿ, ಸಂತ್ರಸ್ತರನ್ನು ಬೀದಿಗೆ ತಳ್ಳಿದೆ.
ಶುಕ್ರವಾರ ಏಕಾಏಕಿ ಬಂದು ಮನೆಯಲ್ಲಿದ್ದ ಸಾಮಗ್ರಿಗಳನ್ನು ಹೊರಗೆಸೆದು ಸಂತ್ರಸ್ತರನ್ನು ಹೊರ ಹಾಕಲಾಗಿದೆ. ಮಳೆ - ಚಳಿ ಲೆಕ್ಕಿಸದೇ ನಿನ್ನೆಯಿಂದ ಬೀದಿ ಬದಿಯಲ್ಲೇ ಹತ್ತಕ್ಕೂ ಅಧಿಕ ಕುಟುಂಬಗಳು ಜೀವನ ನಡೆಸುತ್ತಿವೆ.
ಮಕ್ಕಳು, ವಯಸ್ಸಾದವರು ಸೇರಿದಂತೆ ಹತ್ತು ಕುಟುಂಬಗಳು ನಿನ್ನೆಯಿಂದ ಊಟವಿಲ್ಲದೇ ಕಂಗಾಲಾಗಿವೆ. ಪ್ರವಾಹದಿಂದ ಬಿದ್ದಿರುವ ಮನೆಗೆ ಹೋಗಲಾಗದೇ ಸಂತ್ರಸ್ಥರು ಬೀದಿಯಲ್ಲೇ ಕುಳಿತಿದ್ದಾರೆ. ಮನೆ ನೀಡಿ ಇಲ್ಲವೇ, ತಗಡಿನ ಶೆಡ್ ನಿರ್ಮಿಸಿ ಕೊಡುವಂತೆ ಸಂತ್ರಸ್ತರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ದೊಡ್ಮನೆಯವರ ಆಸ್ತಿಯನ್ನು ನಟ ದರ್ಶನ್ಗೆ ಕೊಡಲಿಲ್ಲ: ಉಮಾಪತಿ ಸ್ಪಷ್ಟನೆ