ಬೆಳಗಾವಿ: ವಸತಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡುವುದರ ಜತೆಗೆ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಹಾಗೂ ಶೌಚಾಲಯ ಸೌಲಭ್ಯವನ್ನು ಕಲ್ಪಿಸಬೇಕೆಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎನ್. ಕೃಷ್ಣಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನುಸಾರ ಆಯೋಗ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಆಹಾರದಿಂದ ವ್ಯಕ್ತಿ, ಕುಟುಂಬ, ಸಮಾಜ ಹಾಗೂ ದೇಶ ಉತ್ತಮವಾಗಿರಲು ಸಾಧ್ಯ. ಅದನ್ನು ಮನಗಂಡು ಸರ್ಕಾರ ಗುಣಮಟ್ಟದ ಆಹಾರವನ್ನು ದೊರಕಿಸಿ ಕೊಡಲು ಆಯೋಗವನ್ನು ರಚಿಸಿದೆ. ಆಯೋಗವು ರಾಜ್ಯದಲ್ಲಿ ಸಂಚರಿಸಿ ಆಹಾರದ ವಿತರಣೆ, ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಯಾವುದೇ ಇಲಾಖೆಯ ಅಧಿಕಾರಿಗಳ ಸಣ್ಣ ಸಣ್ಣ ನಿರ್ಲಕ್ಷ್ಯಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತವೆ. ಆದ್ದರಿಂದ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದ್ರು.
ಮಧ್ಯಾಹ್ನದ ಬಿಸಿಯೂಟ, ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ವಿತರಣೆ, ವಸತಿನಿಲಯಗಳಲ್ಲಿ ಸಮರ್ಪಕವಾಗಿ ಮೂಲಸೌಕರ್ಯಗಳನ್ನು ಒದಗಿಸಿರುವ ಅಧಿಕಾರಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದವರಿಗೆ ಪ್ರಶಂಸಾಪತ್ರ ನೀಡಬೇಕು ಎಂದು ತಿಳಿಸಿದರು.
ಆಹಾರ ಇಲಾಖೆಯ ವಿತರಣಾ ವ್ಯವಸ್ಥೆ, ಮಧ್ಯಾಹ್ನದ ಬಿಸಿಯೂಟ ವಿತರಣೆ, ಅಂಗನವಾಡಿಯಲ್ಲಿ ಮಕ್ಕಳಿಗೆ ಆಹಾರ ಪೂರೈಕೆ, ವಸತಿನಿಲಯಗಳಲ್ಲಿ ಆಹಾರ ವಿತರಣೆಯ ಸಮಸ್ಯೆಗಳು ಹಾಗೂ ಗೋದಾಮುಗಳಲ್ಲಿ ಆಹಾರ ಧಾನ್ಯ ಸಂಗ್ರಹ ವ್ಯವಸ್ಥೆಯನ್ನು ಪರಿಶೀಲಿಸಲಾಗಿದೆ. 2017ರ ಜುಲೈನಲ್ಲಿ ಆಯೋಗ ರಚನೆಯಾಗಿದ್ದು, ಈಗಾಗಲೇ 25 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.
ಆಯೋಗದ ಸದಸ್ಯ ಡಿ.ಜಿ. ಹಸಬಿ ಮಾತನಾಡಿ, ಆಹಾರ ಸುರಕ್ಷತಾ ಕಾಯ್ದೆ ಅಡಿ ಆಯೋಗ ರಚಿಸಲಾಗಿದೆ. ಸಾರ್ವಜನಿಕ ವಿತರಣೆಗೆ ಗೋದಾಮುಗಳಲ್ಲಿ ಸಂಗ್ರಹಿಸಲಾಗುವ ಆಹಾರ ಧಾನ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಬೇಕು. ಇದಲ್ಲದೇ ಆಹಾರಧಾನ್ಯಗಳ ಸಂಗ್ರಹ ಮತ್ತು ವಿತರಣೆಗೆ ಸಂಬಂಧಿಸಿದಂತೆ ದೈನಂದಿನ ಮಾಹಿತಿಯನ್ನು ಸಮರ್ಪಕವಾಗಿ ಇಟ್ಟಿರಬೇಕು.
ಆದರೆ ಜಿಲ್ಲೆಯ ಗೋದಾಮುಗಳಲ್ಲಿ ಆಹಾರ ಪರೀಕ್ಷಾ ಉಪಕರಣಗಳು ಇಟ್ಟಿರುವುದು ಕಂಡುಬರಲಿಲ್ಲ ಎಂದು ತಿಳಿಸಿದರು.
ನಿಯೋಗದ ಸದಸ್ಯೆ ಮಂಜುಳಾಬಾಯಿ ಮಾತನಾಡಿ, ಮಕ್ಕಳ ದಾಖಲಾತಿ ಮತ್ತು ಹಾಜರಾತಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಮಕ್ಕಳಿಗೆ ಪೌಷ್ಠಿಕ ಆಹಾರ ವಿತರಣೆ ಮತ್ತು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸದಿರುವುದು, ರೇಷನ್ ಅಸಮರ್ಪಕ ದಾಸ್ತಾನು, ಕೆಲವು ಕಡೆ ಮಕ್ಕಳಿಗೆ ಹಾಲು ವಿತರಿಸದಿರುವುದು ಗಮನಿಸಲಾಗಿರುತ್ತದೆ. ಆಯೋಗ ಭೇಟಿ ನೀಡಿದ ಅಂಗನವಾಡಿಗಳ ಪೈಕಿ ಕೆಲವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ನಿರ್ಲಕ್ಷ್ಯ ವಹಿಸುತ್ತಿರುವ ಅಂಗನವಾಡಿ ಕೇಂದ್ರದ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.