ಬೆಳಗಾವಿ: ಮಹಾರಾಷ್ಟ್ರ, ಕೇರಳದಲ್ಲಿ ಹೊಸ ಪ್ರಬೇಧದ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಕೇರಳ, ಮಹಾರಾಷ್ಟ್ರ ಗಡಿಯಲ್ಲಿ ನಿಗಾ ವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊರೊನಾ ಹೊಸ ಪ್ರಬೇಧ ಪತ್ತೆಯಾದ ಹಿನ್ನೆಲೆ ಸಾರ್ವಜನಿಕರು ಹೆಚ್ಚಿನ ಜಾಗೃತಿ ವಹಿಸಬೇಕು. ಮಾಸ್ಕ್, ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಈಗಾಗಲೇ ಅಂತಾರಾಜ್ಯ ಸಾರಿಗೆ ವ್ಯವಸ್ಥೆ ಆರಂಭವಾಗಿದೆ. ಈ ಮೊದಲಿನಂತೆ ಜಾಗೃತಿ ವಹಿಸಲು ಸೂಚನೆ ನೀಡಲಾಗಿದೆ ಎಂದರು.
ಮೀಸಲಾತಿಗೆ ವಿರೋಧ ವದಂತಿ:
ಸಂಪುಟದಲ್ಲಿ ಪಂಚಮಸಾಲಿ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಲಾಗಿದೆ ಎನ್ನುವುದು ಕೇವಲ ವದಂತಿಯಷ್ಟೇ. ಈ ಬಗ್ಗೆ ಜಯಮೃತ್ಯುಂಜಯ ಸ್ವಾಮೀಜಿಗೆ ತಪ್ಪು ಮಾಹಿತಿ ನೀಡಲಾಗಿದೆ. ಸಂಪುಟದಲ್ಲಿ ಈ ಬಗ್ಗೆ ಯಾವುದೇ ವಾದ, ವಿವಾದ ಆಗಿಲ್ಲ. ಬೆಳಗಾವಿ ಸುವರ್ಣಸೌಧದ ಉಪವಾಸ ಸಂದರ್ಭದಲ್ಲಿ ಸ್ವಾಮೀಜಿಗೆ ನಾನೇ ಬೆಂಬಲ ನೀಡಿದ್ದೇನೆ. ಯಾರೋ ವದಂತಿಗಳನ್ನು ಹಬ್ಬಿಸಿದ್ದಾರೆ ಎಂದು ಸವದಿ ಬೇಸರ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ಗಡಿಯಲ್ಲಿ ಕನ್ನಡಿಗರ ಸರ್ವೇ ವಿಚಾರಕ್ಕೆ ಹೆಚ್ಚಿನ ಮಹತ್ವ ಕೊಡಬೇಕಿಲ್ಲ, ಜತ್ತ ಭಾಗದಲ್ಲಿ ಹೆಚ್ಚು ಕನ್ನಡ ಮಾತನಾಡುವ ಜನ ಇದ್ದಾರೆ. ಸರ್ವೇ ಮಾಡಿಕೊಂಡು ಏನು ಮಾಡುತ್ತಾರೆ ಮಾಡಿಕೊಳ್ಳಲಿ. ಅಲ್ಲಿನ ಕನ್ನಡಿಗರಿಗೆ ತೊಂದರೆ ಕೊಡುವ ಕೆಲಸ ಮಾಡಿದಾಗ ನಾವು ಯೋಚನೆ ಮಾಡ್ತಿವಿ. ಹೊರ ನಾಡ ಕನ್ನಡಿಗರ ಜತೆಗೆ ನಮ್ಮ ಸರ್ಕಾರ ಸದಾ ಇರಲಿದೆ ಎಂದು ಡಿಸಿಎಂ ಅಭಯ ನೀಡಿದರು.