ಬೆಳಗಾವಿ: ಆರ್ಎಸ್ಎಸ್ ಪ್ರಚಾರಕರಾಗಿದ್ದ ಜಗನ್ನಾಥರಾವ್ ಜೋಶಿ ಅವರಂತಹ ಅನೇಕರು ಭದ್ರ ಬುನಾದಿ ಹಾಕಿದ್ದರಿಂದ ಇಂದು ಬಿಜೆಪಿ ದೇಶದಲ್ಲಿ ವ್ಯಾಪಿಸಿದೆ. ಅವರ ವಿಚಾರಗಳನ್ನು ಜಾರಿಗೆ ತರಲು ನಾವೆಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜನಕಲ್ಯಾಣ ಟ್ರಸ್ಟ್ ವತಿಯಿಂದ ನಗರದ ನ್ಯೂ ಗೂಡ್ಸ್ಶೆಡ್ ರಸ್ತೆಯ ಸಂಘ ಸದನದ ಆವರಣದಲ್ಲಿ ಜಗನ್ನಾಥರಾವ್ ಜೋಶಿ ಜನ್ಮಶತಾಬ್ದಿ ಸ್ಮಾರಕ ಭವನ ನಿರ್ಮಾಣಕ್ಕೆ ಗುರುವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಜಗನ್ನಾಥರಾವ್ ಜೋಶಿ ಕರ್ನಾಟಕದಲ್ಲಿ ಜನ ಸಂಘ ಬೆಳೆಸುವಲ್ಲಿ ಹಾಗೂ ಬಿಜೆಪಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಿಎಂ ಸ್ಮರಿಸಿದರು.
ಅಭಿಮಾನಿಯಾಗಿ ಬಂದಿದ್ದೇನೆ: ನಾನು ಇಲ್ಲಿಗೆ ಮುಖ್ಯಮಂತ್ರಿಯಾಗಿ ಬಂದಿಲ್ಲ. ಜಗನ್ನಾಥರಾವ್ ಜೋಶಿ ಅವರ ಅಪ್ಪಟ ಅಭಿಮಾನಿಯಾಗಿ ಭಾಗವಹಿಸಿದ್ದೇನೆ. ಅವರ ಚುನಾವಣೆಯಲ್ಲಿ ಕೆಲಸ ಮಾಡಿದ್ದೆ. ತಂದೆ ಎಸ್.ಆರ್. ಬೊಮ್ಮಾಯಿ ಅವರೊಂದಿಗೂ ಆತ್ಮೀಯ ಒಡನಾಟ ಹೊಂದಿದ್ದರು. ನರಗುಂದದಲ್ಲಿ ಜನಿಸಿದ ಕನ್ನಡಿಗರವರು. ಪುಣೆಯನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡಿದ್ದರು. ಎಲ್ಲರ ಪ್ರೀತಿಯನ್ನೂ ಗಳಿಸಿದ್ದರು. ಆರ್ಎಸ್ಎಸ್ ಪ್ರಚಾರಕರಾಗಿ, ನಾಯಕರಾಗಿ ಬೆಳೆದರು ಎಂದು ನೆನೆದರು.
ಅಜಾತ ಶತ್ರುವಿನ ನಡುವಳಿಕೆಗೆ ಎಲ್ಲರಿಗೂ ಪ್ರಿತಿ ಇತ್ತು. ಆರ್ಎಸ್ಎಸ್ ಸೇರಿ ಎಲ್ಲಾ ಸಿದ್ದಾಂತ ಮೈಗೂಡಿಸಿಕೊಂಡು ನಾಯಕರಾಗಿ ಬೆಳೆದರು. ದಿನ ಕಳೆದಂತೆ ಉತ್ತರ ಕರ್ನಾಟಕದಲ್ಲಿ ಜಗನ್ನಾಥರಾವ್ ಜೋಶಿ ಮನೆ ಮಾತರಾಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನಿಂದ ಸಂಸದರಾಗಿದ್ದರು. ಧಾರವಾಡ ಲೋಕಸಭೆಯಿಂದ ಸ್ಪರ್ಧಿಸಿ ಸೋತಿದ್ದರು. ಗೋವಾ ವಿಮೋಚನಾ ಚಳವಳಿಯಲ್ಲಿ ಜಗನ್ನಾಥರಾವ್ ಪಾತ್ರ ಪ್ರಮುಖವಾಗಿತ್ತು. ಆ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದರು ಎಂದು ಮೆಲುಕು ಹಾಕಿದರು. ಇನ್ನೂ ಅವರ ಭವನ ನಿರ್ಮಾಣಕ್ಕೆ ಬೇಕಾದ ಎಲ್ಲ ಸಹಾಯ, ಸಹಕಾರ ನೀಡಲು ಸಿದ್ಧವಿದ್ದೇನೆ ಎಂದು ಸಿಎಂ ಭರವಸೆ ನೀಡಿದರು.
ಆರ್ಎಸ್ಎಸ್ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಮಾತನಾಡಿ, ಜಗನ್ನಾಥರಾವ್ ಜೋಶಿ ಅವರು ಎಲ್ಲ ವಿಷಯದ ಬಗ್ಗೆ ಜ್ಞಾನವಿದ್ದ ಆಧುನಿಕ ಋಷಿಯಾಗಿದ್ದರು. ಅಜಾತ ಶತ್ರುವಾಗಿದ್ದರು. ಅವರ ವಿಚಾರಗಳನ್ನು ಜನರ ಬಳಿಗೆ ಒಯ್ಯಲು ಕೈಗೊಂಡಿರುವ ಚಟುವಟಿಕೆಗಳ ಭಾಗವಾಗಿ ಭವನ ನಿರ್ಮಿಸಲಾಗುತ್ತಿದೆ. ವಿಚಾರವುಳ್ಳ ಕಾರ್ಯಕರ್ತರನ್ನು ತಯಾರಿಸುವ ಪ್ರಶಿಕ್ಷಣ ಕೇಂದ್ರ ಇದಾಲಿಗದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಉಮೇಶ ಕತ್ತಿ, ಸಂಸದೆ ಮಂಗಲ ಅಂಗಡಿ, ಶಾಸಕರಾದ ಅನಿಲ ಬೆನಕೆ, ಮಹೇಶ ಕುಮಠಳ್ಳಿ, ಮಹಾಂತೇಶ ದೊಡ್ಡಗೌಡರ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ, ಪಿ. ರಾಜೀವ, ವಿಧಾನಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಅರುಣ್ ಶಹಾಪುರ, ಹಣಮಂತ ನಿರಾಣಿ, ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಉಪಸ್ಥಿತರಿದ್ದರು.
ಇದನ್ನೂ ಓದಿ: ಸಂಪುಟ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ, ನಾಳೆ ದೆಹಲಿಗೆ ತೆರಳುವೆ: ಸಿಎಂ