ಅಥಣಿ : ಪಟ್ಟಣದ ಹೊರವಲಯದ ಚಮಕೇರಿ ಮಡ್ಡಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕೋವಿಡ್ ಕೇರ್ ಸೆಂಟರ್ನ ಡಿಸಿಎಂ ಲಕ್ಷ್ಮಣ್ ಸವದಿ ಉದ್ಘಾಟಿಸಿದರು.
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಥಣಿ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೊವಿಡ್ ಕೇರ್ ಸೆಂಟರ್ ಪ್ರಾರಂಭವಾಗಿದೆ. ಕೇಂದ್ರದಲ್ಲಿ ಖಾಸಗಿ ಹಾಗೂ ಸರ್ಕಾರಿ ವೈದ್ಯರು ಚಿಕಿತ್ಸೆ ನೀಡುತ್ತಾರೆ.
ಆಕ್ಸಿಜನ್ ಕೊರತೆ ನಿಗಿಸಲು 50 ಬೆಡ್ಗಳಿಗೆ ಕಾನ್ಸನ್ಟ್ರೇಟರ್ ಅಳವಡಿಸಲಾಗಿದೆ. ಆಕ್ಸಿಜನ್ ಸಿಲಿಂಡರ್ ಸೌಲಭ್ಯವನ್ನು ಎರಡು ದಿನದಲ್ಲಿ ಒದಗಿಸಲಾಗುತ್ತದೆ. ಜೀವಹಾನಿ ತಪ್ಪಿಸಲು ಅಥಣಿಯಲ್ಲಿ ಹೊಸ ಪ್ರಯೋಗ ಆರಂಭಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.
ಮೂರು ದಿನದ ಹಿಂದೆ ಡಿಸಿಎಂ ಸವದಿ, ಅಣ್ಣನ ಮಗನನ್ನು ಕಳೆದುಕೊಂಡ ದುಃಖದಲ್ಲಿ ಇರುವಾಗಲೇ ಇವತ್ತು ಅವರ ಹಿರಿಯ ಅಣ್ಣ ತೀರಿಕೊಂಡರು. ಇದರ ಮಧ್ಯ ಸಾರ್ವಜನಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ತಾಲೂಕಿನ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕ ಜೀವನಕ್ಕಿಂತ ಸಾರ್ವಜನಿಕ ವಲಯದಲ್ಲಿ ಕಾರ್ಯ ನಿರ್ವಹಿಸುವರಿಗೆ ವೈಯಕ್ತಿಕ ಆಲೋಚನೆ ಮಾಡುವುದು ಸರಿಯಲ್ಲ. ಕುಟುಂಬಕ್ಕೆ ನಾವು ಸೀಮಿತವಾಗಿಲ್ಲ, ಸಮಾಜಕ್ಕೆ ಕಂಟಕ ಬಂದಾಗ ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದವರು ಮೊದಲು ಸಮಾಜ ನೋಡಬೇಕೆಂದು ಡಿಸಿಎಂ ಸವದಿ ಭಾವನಾತ್ಮಕವಾಗಿ ಮಾತನಾಡಿದರು.