ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಪಿಎಂಸಿ) ಹಗರಣ ಹೊರಬಿದ್ದ ಬಳಿಕ ವಹಿವಾಟಿನ ಮೇಲೆ ನಿರ್ಬಂಧ ಹೇರಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಂಗಳವಾರ ಸಡಿಲಗೊಳಿಸಿದೆ.
ಆರ್ಬಿಐ ಬ್ಯಾಂಕಿನ್ ನಗದು ಸ್ಥಾನಮಾನ ಮತ್ತು ಅದರ ಠೇವಣಿದಾರರಿಗೆ ಪಾವತಿಸುವ ಸಾಮರ್ಥ್ಯ ಪರಿಶೀಲಿಸಿದ ಬಳಿಕ ನಗದು ವಿತ್ಡ್ರಾ ಮಿತಿಯನ್ನು 50,000 ರೂ.ಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಈ ಮೊದಲು 40,000 ರೂ.ಗೆ ಅನುಮತಿ ನೀಡಲಾಗಿತ್ತು. ಇದರಿಂದ ಬ್ಯಾಂಕ್ನ ಶೇ. 78ಕ್ಕಿಂತ ಅಧಿಕ ಠೇವಣಿದಾರರು ತಮ್ಮ ಸಂಪೂರ್ಣ ಖಾತೆ ಮೊತ್ತ ಹಿಂಪಡೆಯಲು ಸಾಧ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸೆ. 23ರಂದು ಕಾರ್ಯಾಚರಣೆ ನಿರ್ಬಂಧದ ಆದೇಶ ಹೊರಡಿಸಿದ್ದ ಆರ್ಬಿಐ, ಗ್ರಾಹಕರಿಗೆ ದಿನಕ್ಕೆ ವಿತ್ಡ್ರಾ ಮೊತ್ತವನ್ನು ₹ 1,000ಕ್ಕೆ ನಿಗದಿ ಪಡಿಸಿತ್ತು. ಬ್ಯಾಂಕ್ ಗ್ರಾಹಕರು ಈ ಬಗ್ಗೆ ಆಕ್ಷೇಪ ಹಾಗೂ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಆರ್ಬಿಐ, ವಿತ್ಡ್ರಾ ಮಿತಿಯನ್ನು ₹ 1,000ದಿಂದ ₹ 10,000ಕ್ಕೆ ಏರಿಕೆ ಮಾಡಿತ್ತು. ಮತ್ತೆ ಅದನ್ನು ₹ 40,000ಕ್ಕೆ ಹೆಚ್ಚಿಸಿತ್ತು. ಈಗ 50,000 ರೂ.ಗೆ ನಿಗದಿಪಡಿಸಿದ್ದು, ಈ ಆದೇಶದಿಂದ ಬ್ಯಾಂಕ್ ಠೇವಣಿದಾರರು ಸ್ವಲ್ಪ ನಿರಾಳರಾಗಿದ್ದಾರೆ.