ನವದೆಹಲಿ: ಪ್ರಧಾನಮಂತ್ರಿ ಕಚೇರಿ ಕೇಂದ್ರೀಕೃತ ಆಡಳಿತ ನಡೆಯುತ್ತಿರುವುದರಿಂದ ಭಾರತದ ಅಭಿವೃದ್ಧಿಯು ಹಿನ್ನಡೆಯ ಮಧ್ಯದಲ್ಲಿ ಸ್ಥಗಿತವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.
ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್, ಮಂದಗತಿಯಲ್ಲಿ ಸಾಗುತ್ತಿರುವ ಭಾರತದ ಆರ್ಥಿಕತೆಯ ಕುರಿತು ಮ್ಯಾಗಜಿನ್ವೊಂದಕ್ಕೆ ಬರೆದ ಅಂಕಣದಲ್ಲಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. 'ಉದಾರೀಕರಣದ ಬಂಡವಾಳ ವ್ಯವಸ್ಥೆ, ಭೂಮಿ ಮತ್ತು ಕಾರ್ಮಿಕರ ಮಾರುಕಟ್ಟೆ ಸುಧಾರಣೆಯಾಗಬೇಕು. ಹಾಗೂ ಬಂಡವಾಳ ಹೂಡಿಕೆಗೆ ಹೆಚ್ಚಿನ ಪ್ರಾತನಿಧ್ಯ ಕಲ್ಪಿಸಬೇಕು' ಎಂದಿದ್ದಾರೆ.
ದೇಶೀಯ ಪಾರದರ್ಶಕತೆ ಹಾಗೂ ಸ್ಪರ್ಧಾತ್ಮಕತೆ ಹೆಚ್ಚಿಸಲು ನ್ಯಾಯಯುತವಾಗಿ ಭಾರತ ಮುಕ್ತ ವ್ಯಾಪಾರಕ್ಕೆ ಒಪ್ಪಂದ ಮಾಡಿಕೊಳ್ಳಬೇಕು. ಎಲ್ಲಿ ತಪ್ಪು ಆಗಿದೆ ಎಂಬುದನ್ನು ಅರ್ಥೈಸಿಕೊಳ್ಳಲು, ನಾವು ಮೊದಲು ಕೇಂದ್ರ ಸರ್ಕಾರದ ಆಡಳಿತ ಸ್ವರೂಪದ ಬಗ್ಗೆ ತಿಳಿದುಕೊಳ್ಳಬೇಕು. ಕೇವಲ ನಿರ್ಧಾರಗಳು ಮಾತ್ರವಲ್ಲ, ನೂತನ ಯೋಜನೆಗಳು ಪ್ರಧಾನಿ ಮತ್ತು ಪ್ರಧಾನಮಂತ್ರಿಗಳ ಕಚೇರಿ ಸುತ್ತಲೂ ಆವರಿಸಿವೆ. ಅವುಗಳು ಅದರಿಂದ ಹೊರಬರಬೇಕು ಎಂದು ಬರೆದಿದ್ದಾರೆ.