ನವದೆಹಲಿ: ಹಲವು ಸುತ್ತಿನ ಹಗ್ಗಜಗ್ಗಾಟದ ನಡುವೆ ಜಾರಿಗೆ ಬಂದ 'ಒಂದು ದೇಶ ಒಂದು ತೆರಿಗೆ' ವ್ಯವಸ್ಥೆಯ 'ಸರಕು ಮತ್ತು ಸೇವಾ ತೆರಿಗೆ'ಗೆ (ಜಿಎಸ್ಟಿ) ನಾಳೆಯ ಜುಲೈ 1ಕ್ಕೆ ಎರಡು ವರ್ಷ ಪೂರೈಸಲಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ವ್ಯವಸ್ಥೆಯಾದ ಜಿಎಸ್ಟಿ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಹಣಕಾಸು ಸಚಿವಾಲಯ 'ಜಿಎಸ್ಟಿ ದಿನ'ವೆಂದು ಆಚರಿಸಲಿದೆ. ಅಂಬೇಡ್ಕರ್ ಭವನದಲ್ಲಿ ಕೇಂದ್ರ ಹಾಗೂ ರಾಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಈ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಹಲವು ವಿತ್ತೀಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಎರಡು ವರ್ಷ ಪೂರೈಸಿರುವ ಜಿಎಸ್ಟಿ ಪದ್ಧತಿಯ ಕುರಿತು ವಿಶೇಷ ಉಪನ್ಯಾಸ ಮಾಲಿಕೆ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಜಿಎಸ್ಟಿ ನಡೆದು ಬಂದ ಹಾದಿ, ತೆಗೆದುಕೊಂಡ ತೆರಿಗೆ ಸುಧಾರಣಾ ನಿರ್ಧಾರಗಳು, ಜಿಎಸ್ಟಿಆರ್- 3ಬಿ ಮತ್ತು ಜಿಎಸ್ಟಿಆರ್-1 ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರಲಿವೆ.
2017ರ ಜೂನ್ 30- ಜುಲೈ 1ರಂದು ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಅಂದಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಜಿಎಸ್ಟಿ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದರು.