ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ), ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ಗೆ (ಪಿಸಿಎಂ) ಕೆಲ ದಿನಗಳ ಹಿಂದೆಯಷ್ಟೇ ಕಾರ್ಯಾಚರಣೆಯ ಮೇಲೆ ನಿರ್ಬಂಧ ವಿಧಿಸಿದ ಬಳಿಕ ಈಗ ಮತ್ತೊಂದು ಖಾಸಗಿ ಬ್ಯಾಂಕ್ಗೆ ಕಠಿಣ ಸ್ವರೂಪದ ಆರ್ಥಿಕ ನಿರ್ಬಂಧ (ಪಿಸಿಎ) ವಿಧಿಸಿದೆ.
ಖಾಸಗಿ ವಲಯದ ಲಕ್ಷ್ಮೀ ವಿಲಾಸ್ ಬ್ಯಾಂಕ್ಗೆ ಆರ್ಬಿಐ ನಿರ್ಬಂಧ ಹಾಕಿದೆ. ವಸೂಲಾಗದ ಸಾಲವು ಗರಿಷ್ಠ ಮಟ್ಟದಲ್ಲಿದೆ. ಆರ್ಥಿಕ ನಷ್ಟ ಬಗೆಹರಿಸಲು ಅಗತ್ಯವಾದ ಬಂಡವಾಳ ನಿರ್ವಹಣೆ ಮಾಡದೇ ಇರುವುದು ಮತ್ತು ಸತತ ಎರಡು ವರ್ಷಗಳವರೆಗೆ ಸಂಪತ್ತಿನಿಂದ ಬರುತ್ತಿರುವ ಆದಾಯವನ್ನು ನಕರಾತ್ಮಕವಾಗಿ ಇರುವುದನ್ನು ಗಮನದಲ್ಲಿ ಇರಿಸಿಕೊಂಡು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಆರ್ಬಿಐನ ಈ ನಡೆಯಿಂದ ಅದು ಹೊಸ ಶಾಖೆಯನ್ನು ತೆರೆಯುವಂತಿಲ್ಲ. ಲಾಭಾಂಶ ನೀಡುವಂತಿಲ್ಲ ಮತ್ತು ಕಾರ್ಪೊರೇಟ್ ವಲಯಕ್ಕೆ ನೀಡುವ ಸಾಲದ ಪ್ರಮಾಣದಲ್ಲಿ ಇಳಿಕೆ ಮಾಡುವುದು ಕಡ್ಡಾಯವಾಗಿದೆ. 'ಬ್ಯಾಂಕ್ನ ಕಾರ್ಯಕ್ಷಮತೆ ಸುಧಾರಿಸುವ ದೃಷ್ಟಿಯಿಂದ ಪಿಸಿಎ ವಿಧಿಸಲಾಗಿದೆ. ಇದರಿಂದ ದೈನಂದಿನ ಕೆಲಸಗಳಿಗೆ ಯಾವುದೇ ರೀತಿಯ ಅಡ್ಡಿ ಆಗುವುದಿಲ್ಲ' ಎಂದು ಲಕ್ಷ್ಮೀ ವಿಲಾಸ್ ಬ್ಯಾಂಕ್ ಸ್ಪಷ್ಟನೆ ನೀಡಿದೆ.