ಮುಂಬೈ: ರತನ್ ಟಾಟಾ ಅವರ ಸಹಾನುಭೂತಿಯ ನಡೆ ಮತ್ತೊಮ್ಮೆ ಸಾಬೀತಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಉದ್ಯೋಗಿಯನ್ನು ಭೇಟಿ ಮಾಡಲು ಮುಂಬೈನಿಂದ ಪುಣೆಗೆ ಆಗಮಿಸಿದ್ದರು ಎಂಬುದು ತಡವಾಗಿ ತಿಳಿದುಬಂದಿದೆ.
ಕಳೆದ ಕೊರೊನಾ ವರ್ಷ ಜಗತ್ತು ಇನ್ನಿಲ್ಲದಂತೆ ಕಾಡಿತ್ತು ಈಗಲೂ ಕಾಡುತ್ತಿದೆ. ಒಬ್ಬರನೊಬ್ಬರು ಮುಟ್ಟದಂತೆ, ಪರಸ್ಪರ ತಬ್ಬಿಕೊಳ್ಳದಂತಹ ಸಾಮಾಜಿಕ ಅಂತರಕ್ಕೆ ಸೋಂಕು ನಮ್ಮನ್ನು ತಳ್ಳಿದೆ. ದೂರದೂರಿನ ನೆಂಟರನ್ನೂ ಭೇಟಿಯಾಗಲು ಹಿಂದೆ-ಮುಂದೆ ನೋಡುವ ವೇಳೆಯಲ್ಲಿ, ರತನ್ ಟಾಟಾ ಅವರು ಪುಣೆಯಲ್ಲಿ ಅನಾರೋಗ್ಯ ಪೀಡಿತರಾದ ತಮ್ಮ ಕಂಪನಿಯ ಮಾಜಿ ಉದ್ಯೋಗಿಯನ್ನು ಭೇಟೆ ಮಾಡಿ ಕುಶಲೋಪರಿ ವಿಚಾರಿಸಿದ್ದಾರೆ. ಭಾರತದ ಉದ್ಯಮಿ ದಿಗ್ಗಜ ರತನ್ ಟಾಟಾ ಅವರ ಅಂತಃಕರಣದ ಸಹಾನುಭೂತಿ ಎಂತಹದ್ದು ಎಂಬುದನ್ನು ಈ ಘಟನೆ ಎತ್ತಿತೋರಿಸುತ್ತದೆ.
ಇದನ್ನೂ ಓದಿ: ಇತಿಹಾಸ ಬರೆದಿದ್ದ ಷೇರುಪೇಟೆಯಲ್ಲಿ ಇಂದು ಆರಂಭಿಕ ಇಳಿಕೆ
ಲಿಂಕ್ಡ್ಇನ್ ಪೋಸ್ಟ್ ಪ್ರಕಾರ, ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಉದ್ಯೋಗಿಯನ್ನು ಭೇಟಿಯಾಗಲು 83 ವರ್ಷದ ರತನ್ ಟಾಟಾ ಮುಂಬಯಿಯಿಂದ ಪುಣೆಯ ಫ್ರೆಂಡ್ಸ್ ಸೊಸೈಟಿಗೆ ಪ್ರಯಾಣ ಬೆಳೆಸಿದರು. ತೀರಾ ಖಾಸಗಿ ಭೇಟಿ ಆಗಿದ್ದರಿಂದ ಯಾವುದೇ ರೀತಿಯಲ್ಲಿ ಪ್ರಚಾರವಾಗಲಿ ಮತ್ತು ಮಾಧ್ಯಮಗಳಿಗೆ ಅವಕಾಶ ಇರಲಿಲ್ಲ.
ಈ ಹಿಂದೆಯೂ 26/11 ಉಗ್ರರ ದಾಳಿ ನಡೆದ ಬಳಿಕ ದುರ್ಘಟನೆಯಲ್ಲಿ ಬಾಧಿತರಾದ ಎಲ್ಲ 80 ಉದ್ಯೋಗಿಗಳ ಕುಟುಂಬಗಳ ನಿವಾಸಕ್ಕೆ ಭೇಟಿ ನೀಡಿದ್ದರು. ಅವರ ಮಕ್ಕಳ ಸಂಪೂರ್ಣ ಶಿಕ್ಷಣ ಭರಿಸುವುದಾಗಿ ಒಪ್ಪಿಕೊಂಡು ಅದರಂತೆ ನಡೆದುಕೊಂಡರು. ಸಂತ್ರಸ್ತರ ಕುಟುಂಬ ಮತ್ತು ಅವಲಂಬಿತರಿಗೆ ವೈದ್ಯಕೀಯ ವೆಚ್ಚವನ್ನು ಸಹ ರತನ್ ಅವರೇ ಭರಿಸುತ್ತಿದ್ದಾರೆ.