ನವದೆಹಲಿ: 151 ಪ್ಯಾಸೆಂಜರ್ ರೈಲು ಓಡಿಸಲು ರೈಲ್ವೆಯು ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಿರುವ ನಿರ್ಧಾರದಿಂದ ಯಾವುದೇ ಉದ್ಯೋಗ ನಷ್ಟಕ್ಕೆ ಕಾರಣವಾಗುವುದಿಲ್ಲ. ಬದಲಿಗೆ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಹೊಸ ತಂತ್ರಜ್ಞಾನ ಪರಿಚಯವಾಗಲಿದೆ. ಬೇಡಿಕೆಯ ಮೇರೆಗೆ ರೈಲುಗಳನ್ನು ಒದಗಿಸಲು ಸಹಕಾರಿಯಾಗುತ್ತದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಹೇಳಿದ್ದಾರೆ.
109 ಮಾರ್ಗಗಳಲ್ಲಿ 151 ರೈಲುಗಳನ್ನು ಖಾಸಗೀಕರಣಗೊಳಿಸಲು ರೈಲ್ವೆ ತೆಗೆದುಕೊಂಡ ಕ್ರಮವನ್ನು ವಿರೋಧ ಪಕ್ಷಗಳು ಟೀಕಿಸಿದ್ದು, ಬಡ ಜನರ ಜೀವಸೆಲೆಯನ್ನೇ ಕಿತ್ತುಕೊಂಡಂತೆ ಆಗುತ್ತದೆ ಎಂದು ಆರೋಪಿಸಿದ್ದರು. ಇದಕ್ಕೆ ಸ್ಪಷ್ಟನೆಯನ್ನು ಯಾದವ್ ಅವರು ನೀಡಿದ್ದಾರೆ.
ಆತಂಕಗಳನ್ನು ನಿವಾರಿಸಿ ಕೇವಲ 5 ಪ್ರತಿಶತದಷ್ಟು ರೈಲುಗಳನ್ನು ಖಾಸಗಿ ಆಪರೇಟರ್ಗಳಿಗೆ ನೀಡಲಾಗುತ್ತಿದೆ. ಅವುಗಳಲ್ಲಿ 95 ಪ್ರತಿಶತ ರೈಲುಗಳು ರಾಷ್ಟ್ರೀಯ ಸಾರಿಗೆದಾರರು ನಿಗದಿಪಡಿಸಿದ ಶುಲ್ಕದಲ್ಲಿ ರೈಲ್ವೆ ಸೇವೆ ಒದಗಿಸಲಿದ್ದಾರೆ. ರೈಲ್ವೆಯು ಪ್ರಸ್ತುತ ತನ್ನ ನೆಟ್ವರ್ಕ್ನಲ್ಲಿ 2,800ಕ್ಕೂ ಅಧಿಕ ಮೇಲ್ / ಎಕ್ಸ್ಪ್ರೆಸ್ ರೈಲುಗಳನ್ನು ನಿರ್ವಹಿಸುತ್ತಿದೆ. ಬೇಡಿಕೆಗೆ ಅನುಗುಣವಾಗಿ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಬಡ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಸ್ವತಃ ಈ ರೈಲುಗಳ ಸುಂಕ ನಿಗದಿಪಡಿಸುತ್ತದೆ. ಈ ಕ್ರಮವು ಬಡವರಿಗೆ ಸಾರಿಗೆ ಸೇವೆಗಳ ಲಭ್ಯತೆ ಸುಧಾರಿಸುತ್ತದೆ. 2030ರ ವೇಳೆಗೆ ನಾವು 13 ಬಿಲಿಯನ್ ಪ್ರಯಾಣಿಕರನ್ನು ಹೊಂದಲಿದ್ದೇವೆ. ಜೊತೆಗೆ ಉದ್ಯೋಗಗಳ ಅವಕಾಶ ಹೆಚ್ಚಾಗುತ್ತದೆ ಎಂದರು.
ಟಿಕೆಟ್ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 50 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ರೈಲು ಪ್ರಯಾಣಕ್ಕಾಗಿ ವೇಟ್ಲಿಸ್ಟ್ ಮಾಡಲಾಗಿತ್ತು. ಮುಂಬರುವ ವರ್ಷಗಳಲ್ಲಿ ಈಗಿರುವ ಅಂತರವನ್ನ ವಿಸ್ತರಿಸುವ ನಿರೀಕ್ಷೆಯಿದೆ ಎಂದರು.