ನವದೆಹಲಿ: ಸ್ವತಂತ್ರ ಭಾರತದ ಬಳಿಕ ತೆರಿಗೆ ಸುಧಾರಣೆಯಲ್ಲಿ ಅಮೂಲಾಗ್ರ ಬದಲಾವಣೆಯಾದ ಜಿಎಸ್ಟಿ ಜಾರಿಯಾದ ಎರಡು ವರ್ಷಗಳ ಅವಧಿಯಲ್ಲಿ ಸಾಕಷ್ಟು ಪರ-ವಿರೋಧದ ಮಾತುಗಳು ಕೇಳಿಬಂದಿವೆ.
2017ರ ಜುಲೈ 1ರ ಜಿಎಸ್ಟಿ ಜಾರಿ ಬಳಿಕ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, 'ಜಿಎಸ್ಟಿ ಯಾವುದೇ ಒಂದು ಸರ್ಕಾರದ ಅಥವಾ ಪಕ್ಷದ ಸಾಧನೆಯಲ್ಲ. ಇದು ಎಲ್ಲಾ ಪಕ್ಷಗಳ ಒಗ್ಗಟ್ಟಿನ ಫಲ. ಹಲವು ಆರ್ಥಿಕ ತಜ್ಞರಿಂದ ರೂಪಗೊಂಡ ಭಾರತಕ್ಕೆ ಸಿಕ್ಕ ಆರ್ಥಿಕ ಸ್ವಾತಂತ್ರ್ಯ'ವೆಂದು ಬಣ್ಣಿಸಿದ್ದರು.
ಜಿಎಸ್ಟಿ ಜಾರಿ ಬೆನ್ನಲ್ಲೇ ಗುಜರಾತ್ಗೆ ಭೇಟಿ ನೀಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜಿಎಸ್ಟಿಗೆ ಹೊಸ ವ್ಯಾಖ್ಯಾನ ನೀಡಿದ್ದರು. 'ಜಿಎಸ್ಟಿ ಎಂದರೆ ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ ಅಲ್ಲ. ಇದು ಗಬ್ಬರ್ ಸಿಂಗ್ ಟ್ಯಾಕ್ಸ್' ಎಂದು ಲೇವಡಿ ಮಾಡಿದ್ದರು. ಇದಕ್ಕೂ ಮೊದಲೇ ಸಾಕಷ್ಟು ವಾದ- ಪ್ರತಿವಾದಗಳು ಕೇಳಿ ಬಂದಿದ್ದರೂ, ಇದಾದ ಬಳಿಕ ಜಿಎಸ್ಟಿ ವಿರುದ್ಧ ಹಲವು ಪಕ್ಷಗಳ ಮುಖಂಡರು, ಸಾಮಾಜಿಕ ಹೋರಾಟಗಾರರು, ವರ್ತಕರು ದನಿ ಎತ್ತಿದ್ದರು. ಮತ್ತೆ ಕೆಲವರು ಪರವಾಗಿ ವಾದಿಸಿ ಪ್ರತ್ಯುತ್ತರ ನೀಡಿದ್ದರು.
ಆರಂಭಿಕ ವರ್ಷದಲ್ಲಿ ದೊಡ್ಡ ಪ್ರಮಾಣದ ವಿರೋಧಗಳು ಜಿಎಸ್ಟಿಗೆ ವ್ಯಕ್ತವಾಗಿದ್ದವು. ಆಗಾಗ ಜಿಎಸ್ಟಿ ಮಂಡಳಿ ಸಭೆ ಕರೆದು ತಪ್ಪುಗಳನ್ನು ತಿದ್ದಿಕೊಳ್ಳುವ, ಸ್ಲ್ಯಾಬ್ಗಳನ್ನು ದರ ಇಳಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಇಂತಹ ನಡೆಯಿಂದ ಕೆಲವು ಆರ್ಥಿಕ ತಜ್ಞರು ಉತ್ತಮ ಮಾರ್ಕ್ಸ್ ನೀಡಿದ್ದು, ಸಾಗಬೇಕಾದ ಹಾದಿಯಲ್ಲಿ ಸಾಕಷ್ಟು ಸುಧಾರಣೆ ಕಾಣಬೇಕಿದೆ ಎಂದು ಎಚ್ಚರಿಸಿದರು.
16 ವರ್ಷಗಳ ಹಿಂದಿನ ಜಿಎಸ್ಟಿಯ ಪರಿಕಲ್ಪನೆ 2017ರಲ್ಲಿ ಸಾಕಾರಗೊಂಡಿತು. ವಿಶ್ವದಲ್ಲಿ ಸುಮಾರು 160 ರಾಷ್ಟ್ರಗಳಲ್ಲಿ ಜಿಎಸ್ಟಿ ಜಾರಿಯಲ್ಲಿದ್ದು, ಅತ್ಯಂತ ಪ್ರಗತಿಪರ ಪರೋಕ್ಷ ತೆರಿಗೆ ವಿಧಾನವೆಂಬ ಹೆಗ್ಗಳಿಕೆ ಇದರದ್ದಾಗಿದೆ. ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಜಿಎಸ್ಟಿ ಜಾರಿಗೆ ಬಂದಾಗ ಹಣದುಬ್ಬರದ ಸಮಸ್ಯೆ ಸಾಕಷ್ಟು ಕಾಡಿತ್ತು. ಆದರೆ, ಭಾರತದಲ್ಲಿ ಆರಂಭಿಕ ದಿನಗಳಲ್ಲಿ ಅದರ ಪರಿಣಾಮ ಕಾಣಿಸಿಕೊಳ್ಳಲಿಲ್ಲ. ಇತ್ತೀಚಿಗೆ ಹೆಚ್ಚಾಗುತ್ತಿರುವ ಹಣದುಬ್ಬರದ ಸಮಸ್ಯೆ ಆಹಾರ ಹಾಗೂ ತೈಲಬೆಲೆಗಳ ಏರಿಕೆಯು ಜಿಎಸ್ಟಿಯಿಂದ ಎಂಬ ಅಣಕು ಮಾತುಗಳು ಪ್ರತಿಪಕ್ಷಗಳಿಂದ ಕೇಳಿಬರುತ್ತಿವೆ.
ಜಿಎಸ್ಟಿ ಬಳಿಕ ಈ ಹಿಂದೆ ಚಾಲ್ತಿಯಲ್ಲಿದ್ದ ಸುಮಾರು 17 ವಿಧದ ತೆರಿಗೆಗಳು ರದ್ದಾಗಿವೆ. ಅಬಕಾರಿ ಸುಂಕ, ಸೇವಾ ತೆರಿಗೆ, ಕೇಂದ್ರ ತೆರಿಗೆ, ರಾಜ್ಯ ಸರ್ಕಾರಗಳು ವಿಧಿಸುತ್ತಿದ್ದ ವ್ಯಾಟ್, ಮಾರಾಟ ತೆರಿಗೆ, ಆಕ್ಟ್ರಾಯ್ ತೆರಿಗೆಗಳು ಇಲ್ಲವಾಗಿವೆ. ಜನರಿಗೆ ಎರಡೆರಡು ಬಾರಿ ತೆರಿಗೆ ಕಟ್ಟುವ ಆರ್ಥಿಕ ಹೊರೆ ಇಲ್ಲವಾಗಿದೆ ಎಂದು ಆಡಳಿತರೂಢ ಪಕ್ಷ ಜಿಎಸ್ಟಿ ಜಾರಿಯನ್ನು ಸಮರ್ಥಿಸಿಕೊಳ್ಳುತ್ತಿದೆ.
ಜನಸಾಮಾನ್ಯರು ಬಳಸುವ ನಿತ್ಯದ ಉತ್ಪನ್ನಗಳು ಜಿಎಸ್ಟಿ ವ್ಯಾಪ್ತಿಗೆ ಬಂದಿಲ್ಲ. ಅದರಲ್ಲಿ ಮುಖ್ಯವಾಗಿ ವಿದ್ಯುತ್, ಮದ್ಯ, ಪೆಟ್ರೋಲಿಯಂ ಇತರೆ ಸರಕುಗಳು ಇದರಡಿ ಬರಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ರಾಜ್ಯ ಸರ್ಕಾರಗಳ ವ್ಯಾಪ್ತಿಯ ಎಸ್ಜಿಎಸ್ಟಿ ಪಾಲು ಕೈತಪ್ಪಲಿದೆ ಹಾಗೂ ತಮ್ಮ ಖಜಾನೆಯ ಆದಾಯದ ಮೂಲಗಳು ಕೇಂದ್ರದ ಪಾಲಾಗಲಿದೆ ಎಂಬ ಆತಂಕದಿಂದ ಹಲವು ರಾಜ್ಯಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಕೇಂದ್ರ- ರಾಜ್ಯಗಳ ಸಂಘರ್ಷದ ಮಧ್ಯೆ ನಾಗರಿಕರು ಹೆಚ್ಚುವರಿ ತೆರಿಗೆ ಪಾವತಿಯ ವಿಧಾನ ತಪ್ಪುತ್ತಿಲ್ಲ.
ನೂತನ ತೆರಿಗೆ ಜಾರಿ ಬಳಿಕ ಅದನ್ನು ಅರ್ಥೈಹಿಸಿಕೊಳ್ಳುವುದು ಭಾರಿ ಕಷ್ಟಕರವಾಯಿತು. ಎಷ್ಟೋ ವರ್ತಕರಿಗೆ ಇದು ಹೇಗೆ? ಏನು? ಎತ್ತ? ಎಂಬುದರ ಬಗ್ಗೆ ಸ್ಪಷ್ಟ ಅರಿವಿಲ್ಲದೆ ಸಾಕಷ್ಟು ಗೊಂದಲದಲ್ಲಿದ್ದರು. ತೆರಿಗೆಯ ಮರುಪಾವತಿ ಸಕಾಲದಲ್ಲಿ ಆಗುವುದೇ ಎಂಬುದಕ್ಕೆ ಖಾತರಿ ಏನು ಎಂಬ ಪ್ರಶ್ನೆಗಳು ವರ್ತಕರ ಹಾಗೂ ಉದ್ಯಮಿಗಳ ವಲಯದಲ್ಲಿ ಮೂಡಿದ್ದವು. ಕೆಲವರಿಗೆ ಈ ಬಗ್ಗೆ ಈಗ ಉತ್ತರ ಸಿಕ್ಕಿದ್ದು, ಹಲವರು ಗೊಂದಲದಲ್ಲಿ ಇದ್ದಾರೆ.