ನವದೆಹಲಿ: ಭಾರತ ಹಾಗೂ ಪಾಕ್ ನಡುವಿನ ಸಂಪರ್ಕ ಕೊಂಡಿಯಾಗಿದ್ದ ಸಂಜೋತ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಪಾಕಿಸ್ತಾನ ಬಂದ್ ಮಾಡಿದ ಮರು ದಿನವೇ ಭಾರತ ಕೂಡ ರೈಲು ಸಂಚಾರ ಸ್ಥಗಿತಗೊಳಿಸಿದೆ.
ಸಂಜೋತ ಎಕ್ಸ್ಪ್ರೆಸ್ ಸಂಚಾರ ನಿಷೇಧದಿಂದಾಗಿ ವಾಘಾ-ಅಟ್ಟಾರಿ ಬಾರ್ಡರ್ನಲ್ಲಿ ನೂರಾರು ಜನರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಭಾನುವಾರದಂದು ಮಾತ್ರ ದೆಹಲಿಯಿಂದ ಅಟ್ಟಾರಿವರೆಗೂ ರೈಲು ಸಂಚರಿಸಿದರೆ, ಅತ್ತ ಪಾಕಿಸ್ತಾನದ ಲಾಹೋರ್ ಮತ್ತು ಅಟ್ಟಾರಿ ನಡುವೆ ಸಂಚರಿಸುತ್ತಿತ್ತು. ಇದರಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಇಳಿದು ಪ್ರಯಾಣಿಕರು ರೈಲು ಬದಲಾಯಿಸುವುದು ಸಾಮಾನ್ಯವಾಗಿದೆ.
ಲಾಹೋರ್ ಮತ್ತು ಅಟ್ಟಾರಿ ನಡುವೆ ಸಂಚರಿಸುತ್ತಿದ್ದ ಸಂಜೋತ ಎಕ್ಸ್ಪ್ರೆಸ್ 14607/14608ಅನ್ನು ಪಾಕಿಸ್ತಾನ ರದ್ದುಗೊಳಿಸಿದೆ. ಪ್ರತಿಯಾಗಿ ದೆಹಲಿ ಮತ್ತು ಅಟ್ಟಾರಿ ನಡುವೆ ಓಡುತ್ತಿದ್ದ ಲಿಂಕ್ ಎಕ್ಸ್ಪ್ರೆಸ್ ರೈಲು 14001/14002ಅನ್ನು ರದ್ದುಪಡಿಸಲಾಗಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.