ಮಂಗಳೂರು; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಂದರ್ಶನದ ವಿಡಿಯೋದ ಆಡಿಯೋವನ್ನು ತಿರುಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿರುವ ಸುನಿಲ್ ಬಜಿಲಕೇರಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಂಘಪರಿವಾರದ ಕಾರ್ಯಕರ್ತನಾಗಿ ಕಳೆದ ಹಲವು ವರ್ಷಗಳಿಂದ ಈಗಿನ ಬಿಜೆಪಿ ನಾಯಕರ ಬಗ್ಗೆ ಅಸಮಾಧಾನವನ್ನು ಸುನಿಲ್ ಬಜಿಲಕೇರಿ ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ಇತ್ತೀಚೆಗೆ ಎಂಆರ್ಪಿಎಲ್ನಲ್ಲಿ ಸ್ಥಳೀಯರಿಗೆ ಉದ್ಯೋಗ ಕಡೆಗಣಿಸುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಇನ್ನು ಹಿಂದುತ್ವ ಅಲ್ಲ, ಬಂಧುತ್ವಕ್ಕಾಗಿ ಹೋರಾಟ ಎಂದು ಘೋಷಿಸಿದ್ದರು. ಫೇಸ್ ಬುಕ್ನಲ್ಲಿ ಸಕ್ರಿಯವಾಗಿರುವ ಹಿಂದೂ ಸಂಘಟನೆಯ ಕಾರ್ಯಕರ್ತೆಯೊಬ್ಬರು ತಮ್ಮ ಫೇಸ್ ಬುಕ್ನಲ್ಲಿ ಸುನಿಲ್ ಬಜಿಲಕೇರಿಗೆ ತರಾಟೆಗೆ ತೆಗೆದುಕೊಂಡಿದ್ದರು.
ಇದೇ ಯುವತಿ ಮಂಗಳೂರಿನ ಖಾಸಗಿ ಚಾನೆಲ್ನಲ್ಲಿ ನಡೆದ ಬಿಜೆಪಿ ರಾಜ್ಯಾಧ್ಯಕ್ಷರ ಸಂದರ್ಶನದ ವೇಳೆ ಲೈವ್ ಫೋನ್ ಇನ್ ಕರೆ ಮಾಡಿ ನಳಿನ್ ಕುಮಾರ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದರು.
ಇದಾದ ಬಳಿಕ ಸುನಿಲ್ ಬಜಿಲಕೇರಿಗೆ ತರಾಟೆಗೆ ತೆಗೆದುಕೊಂಡ ಯುವತಿಯ ಆಡಿಯೋ ವನ್ನು ಚಾನೆಲ್ನ ಬಿಜೆಪಿ ರಾಜ್ಯಾಧ್ಯಕ್ಷರ ಸಂದರ್ಶನಕ್ಕೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗಿತ್ತು. ಯುವತಿ ಲೈವ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾಳೆ ಎಂಬ ರೀತಿಯಲ್ಲಿ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಸುನಿಲ್ ಬಜಿಲಕೇರಿಯನ್ನು ಬಂಧಿಸಿದ್ದಾರೆ.