ಮೈಸೂರು: ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಮಾಟ್೯ ಫೋನ್ ವಿತರಣೆ ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಡಿಡಿಪಿಐ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಮಾರ್ಟ್ಫೋನ್ ವಿತರಣೆ ಸಂಬಂಧ ಈಗಾಗಲೇ ಸರ್ವೇ ನಡೆಸಲಾಗಿದೆ. ಹಳ್ಳಿಗಳ ಬಡ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣದಿಂದ ವಂಚಿತರಾಗಬಾರದು. ಮುಂದಿನ ಶೈಕ್ಷಣಿಕ ವರ್ಷ ಹೇಗಿರುತ್ತೋ ಗೊತ್ತಿಲ್ಲ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಇವತ್ತು ಆನ್ಲೈನ್ ಶಿಕ್ಷಣಕ್ಕೆ ಸ್ಮಾರ್ಟ್ಫೋನ್ ಅಗತ್ಯವಾಗಿದೆ ಎಂದರು.
ಮಕ್ಕಳ ಹಾಜರಾತಿ, ಸ್ಮಾರ್ಟ್ಫೋನ್ ಅಗತ್ಯತೆ ಬಗ್ಗೆ ವರದಿ ನೀಡಲು ಎಲ್ಲಾ ಡಿಡಿಪಿಐಗಳಿಗೆ ಸೂಚನೆ ನೀಡಿದ್ದೇನೆ. ಈಗ ಎಂಟು ತಿಂಗಳು, ವರ್ಷಕ್ಕೆ ಒಮ್ಮೆ ಫೋನ್ ಬದಲಾಯಿಸುವುದು ಟ್ರೆಂಡ್ ಆಗಿದೆ. ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಸ್ಮಾರ್ಟ್ಫೋನ್ ಬ್ಯಾಂಕ್ ಮಾಡಬಹುದಾ ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ನಮ್ಮ ಸರ್ಕಾರಿ ಶಾಲೆಗಳಲ್ಲಿ ಬಡವರು, ಕೂಲಿ ಕಾರ್ಮಿಕರ ಮಕ್ಕಳೇ ಹೆಚ್ಚಾಗಿರುತ್ತಾರೆ. ಹೀಗಾಗಿ ತಜ್ಞರೊಂದಿಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗೆ ಪರ ವಿರೋಧ ಚರ್ಚೆ ವಿಚಾರವಾಗಿ ಮಾತನಾಡಿ, ಕಳೆದ ಬಾರಿಯೂ ಪರ-ವಿರೋಧ ಚರ್ಚೆ ಕೇಳಿ ಬಂದಿತ್ತು. ಶೇ.98 ರಷ್ಟು ಮಕ್ಕಳು ಪರೀಕ್ಷೆಗೆ ಹಾಜರಾಗಿದ್ರು. ಇಡೀ ದೇಶವೇ ನೋಡುವಂತೆ ಪರೀಕ್ಷೆ ನಡೆಸಿದ್ವಿ. ಈ ಬಾರಿಯೂ ಪರೀಕ್ಷೆ ನಡೆಸುವ ಸಂಬಂಧ ಮಾಜಿ ಶಿಕ್ಷಣ ಸಚಿವರು, ಪರಿಷತ್ ಸದಸ್ಯರ, ಶಿಕ್ಷಣ ತಜ್ಞರ ಜೊತೆ ಮಾತುಕತೆ ನಡೆಸುತ್ತೇನೆ. ಎಲ್ಲಾ ಭಾಗಗಳಲ್ಲಿ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ, ಸಲಹೆ ಪಡೆಯುತ್ತೇವೆ. ಈ ಹಿನ್ನಲೆಯಲ್ಲಿ ಇಂದು ಮೈಸೂರಿನಲ್ಲೂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ಸಚಿವರು ತಿಳಿಸಿದರು.