ಹುಬ್ಬಳ್ಳಿ : ನೀರಿಗೆ ನೀರು ಎಂಬ ಷರತ್ತು ಮುಂದಿಟ್ಟಿರುವ ಮಹಾರಾಷ್ಟ್ರ ಸಚಿವರ ಜತೆ ಚರ್ಚಿಸುವ ಮೊದಲು ವಸ್ತುಸ್ಥಿತಿಯನ್ನು ಅಧ್ಯಯನ ಮಾಡುವುದಾಗಿ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಡಿಕೆಶಿ, ಉಭಯ ರಾಜ್ಯಗಳ ಜಲ ಸಂಪನ್ಮೂಲ ಸಚಿವರು ಚರ್ಚೆ ನಡೆಸಬೇಕು ಎನ್ನುವುದು ಮಹಾರಾಷ್ಟ್ರ ಸಿಎಂ ಸಲಹೆ. ಜತೆಗೆ ಕರ್ನಾಟಕ ಈಗಾಗಲೇ ಕುಡಿಯುವ ಉದ್ದೇಶಕ್ಕೆ ಬಿಡುಗಡೆ ಮಾಡಿರುವ ನೀರು ತಲುಪಿಲ್ಲ ಎಂದು ದೂರು ಬಂದಿದೆ. ಹೀಗಾಗಿ ಖುದ್ದು ಸ್ಥಳ ಪರಿಶೀಲನೆ ನಡೆಸಲು ಬೆಳಗಾವಿ ಗಡಿಭಾಗಗಳಿಗೆ ಶನಿವಾರ ಭೇಟಿ ನೀಡುತ್ತಿರುವುದಾಗಿ ಹೇಳಿದರು.
ನಾಳೆ ಚಿಕ್ಕೋಡಿ ಮಾರ್ಗವಾಗಿ ಸುತ್ತಮುತ್ತಲ ಜಲಾಶಯಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತೇನೆ. ಸಂಬಂಧಿಸಿದ ಜಿಲ್ಲೆಗಳ ಮುಖಂಡರು, ಅಧಿಕಾರಿಗಳಿಗೆ ಈ ವೇಳೆ ಹಾಜರಿರುವಂತೆ ಪಕ್ಷಾತೀತವಾಗಿ ಆಹ್ವಾನ ನೀಡಲಾಗಿದೆ. ಯಾರಿಗೆ ಆಸಕ್ತಿ ಇದೆಯೋ ಅವರೆಲ್ಲರೂ ಬರಬಹುದು. ಸಂಬಂಧ ಪಟ್ಟ ಎಲ್ಲ ಶಾಸಕರಿಗೂ ನಮ್ಮ ಅಧಿಕಾರಿಗಳಿಂದ ಆಹ್ವಾನ ನೀಡಲಾಗಿದೆ. 2 ರಾಜ್ಯಗಳ ನಡುವಣ ಒಪ್ಪಂದ ಆಗಬೇಕಿರುವುದರಿಂದ 2 ರಾಜ್ಯಗಳ ಹಿತದೃಷ್ಟಿಯನ್ನು ನೋಡಬೇಕಾಗುತ್ತದೆ. ನೀರಿಗೆ ನೀರು ಎನ್ನುತ್ತಿರುವಾಗ ನಮ್ಮ ರೈತರಿಗೂ ಏನು ತೊಂದರೆ ಆಗಬಾರದು, ಅವರಿಗೂ ತೊಂದರೆಯಾಗಬಾರದು. ಜಗಳ ಮಾಡಲು ನಮಗೆ ಇಷ್ಟವಿಲ್ಲ. ಹೀಗಾಗಿ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.