ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಪಡೆದಿದ್ದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿನ್ನಡೆಯಾಗಿರುವುದಕ್ಕೆ ಪಕ್ಷದ ರಾಜ್ಯ ನಾಯಕರು ಮತ್ತು ಸ್ಥಳೀಯ ಶಾಸಕರ ಧೋರಣೆ ಕಾರಣ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿಗೆ ಜಿಲ್ಲಾ ಮುಖಂಡರು ದೂರು ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಿನ್ನೆ ಅರಮನೆ ಮೈದಾನದಲ್ಲಿ ಬಿಜೆಪಿಯು ಲೋಕಸಭೆ ಚುನಾವಣೆ ಗೆದ್ದ ಖುಷಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಮತ್ತು ನೂತನ ಸಂಸದರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು ಮತ್ತು ಜಿಲ್ಲಾ ಮುಖಂಡರು ಆಗಮಿಸಿದ್ದರು. ಈ ವೇಳೆ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಮುಖಂಡರು ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಮತ್ತು ರಾಜ್ಯಮಟ್ಟದ ಕೆಲವು ಮುಖಂಡರು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿನ್ನಡೆಯಾದ ಬಗ್ಗೆ ಬೇಸರ ತೋಡಿಕೊಂಡರು ಎಂದು ತಿಳಿದುಬಂದಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಆಯಾ ಜಿಲ್ಲೆಗಳ ಮುಖಂಡರು ಹಿನ್ನಡೆಗೆ ಕಾರಣವೇನು ಎನ್ನುವುದನ್ನು ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಗೆ ದೂರು ನೀಡುವುದರ ಮೂಲಕ ಸೋಲಿಗೆ ಕಾರಣ ತಿಳಿಸಿದ್ದಾರೆ. ಅಲ್ಲದೆ, ಶಾಸಕರು ಮತ್ತು ಸಂಸದರನ್ನು ಆಯ್ಕೆ ಮಾಡುವ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಅಧಿಕ ಸಮಯ ನೀಡಿ ಕೆಲಸ ಮಾಡಿದ್ದರು. ಆದರೆ, ಕಾರ್ಯಕರ್ತರ ಚುನಾವಣೆ ಅಂತಾನೇ ಪರಿಗಣಿಸುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಥಳೀಯ ಶಾಸಕರು ಹೆಚ್ಚು ಸಮಯ ನೀಡದಿರುವುದು ಬಿಜೆಪಿ ಹಿನ್ನಡೆಗೆ ಕಾರಣ ಎಂದು ಪಕ್ಷದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕರ ಚುನಾವಣೆಯಲ್ಲಿ ನಾವು ಮನೆಬಿಟ್ಟು ಬಂದು ಕೆಲಸ ಮಾಡುತ್ತೇವೆ. ಆದರೆ, ಈ ಬಾರಿ ಕಾರ್ಯಕರ್ತರ ಚುನಾವಣೆಯಲ್ಲಿ ಶಾಸಕರು ಹೆಚ್ಚಿನ ಜವಾಬ್ದಾರಿ ತಗೆದುಕೊಳ್ಳಲಿಲ್ಲ. ಲೋಕಲ್ ಫೈಟ್ನಲ್ಲಿ ಕಡಿಮೆ ಅಂತರದಲ್ಲಿ ಹಲವಾರು ಸೀಟು ಕಳೆದುಕೊಂಡಿದ್ದೇವೆ. ಪಕ್ಷದ ಅಭ್ಯರ್ಥಿ ವಿರುದ್ಧ ಟಿಕೆಟ್ ಸಿಗದೇ ಇರೋರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಬಂಡಾಯ ಅಭ್ಯರ್ಥಿಗಳನ್ನ ಮನವೊಲಿಸುವಲ್ಲಿ ಸ್ಥಳೀಯ ಶಾಸಕರು ಮುಂದಾಗಲಿಲ್ಲ. ಶಾಸಕರ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಗಳ ಮನವೊಲಿಕೆಗೆ ಮುಂದಾಗುವಂತೆ ರಾಜ್ಯ ನಾಯಕರು ಕೂಡಾ ಸ್ಥಳೀಯ ಶಾಸಕರಿಗೆ ನಿರ್ದೇಶನ ನೀಡಲಿಲ್ಲ. ಕಾರ್ಯಕರ್ತರ ಚುನಾವಣೆಗಳಿಗೆ ಶಾಸಕರು, ರಾಜ್ಯ ನಾಯಕರು ಹೆಚ್ಚು ಗಮನ ಕೊಡದೇ ಇರೋದು ಹಿನ್ನಡೆಗೆ ಕಾರಣ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿಗಳಿಗೆ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.