ಚಾಮರಾಜನಗರ: ರಕ್ತ ಕುಡಿದ ಪೂಜಾರಿ, ಸರಳು ಚುಚ್ಚಿಕೊಂಡು ನೇತಾಡಿದ ಭಕ್ತರ ಕುರಿತು ಈ ಹಿಂದೆ ಸುದ್ದಿ ನೋಡಿರುತ್ತೀರಿ. ಈಗ ಮತ್ತದೇ ರೀತಿಯ ಭಯಾನಕ, ಎದೆ ಝಲ್ಲೆನಿಸುವ ಬಾಯಿ ಬೀಗದ ಸುದ್ದಿ ಇಲ್ಲಿದೆ ನೋಡಿ.
ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆಯುವ ಬಹುತೇಕ ಮಾರಿ ಹಬ್ಬಗಳಲ್ಲಿ ಬಾಯಿಗೆ ಬೀಗ ಆಚರಣೆ ನಡೆಯುತ್ತಿದ್ದು, ಮಂಗಳವಾರ ಹೊಸದೊಡ್ಡಿ ಗ್ರಾಮದಲ್ಲಿ 20 ಅಡಿ ಸರಳುಗಳನ್ನು ಬಾಯಿಗೆ ಚುಚ್ಚಿಕೊಂಡು ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ.
ಈ ಕುರಿತು ಹೊಸದೊಡ್ಡಿ ಗ್ರಾಮದ ಕುಮಾರ್ ಎಂಬವರು ಮಾತನಾಡಿ, ನಾನು ಇದನ್ನೆಲ್ಲಾ ನಂಬುತ್ತಿರಲಿಲ್ಲ, ಬೇಕಾಬಿಟ್ಟಿಯಂತೆ ಹಾಕಿಕೊಳ್ಳುತ್ತಾರೆ ಎಂದುಕೊಂಡಿದ್ದೆ. ಆದರೆ, ೨ ವರ್ಷದ ಹಿಂದೆ ನನ್ನ ಇಷ್ಟಾರ್ಥವೂ ಈಡೇರಿಕೆಯಾದ ಬಳಿಕ ನಾನು ಕೂಡ ಈಗ ಬಾಯಿಗೆ ಬೀಗ ಹಾಕಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ. ಸರಳುಗಳನ್ನು ಚುಚ್ಚಿಕೊಂಡಾಗ ಯಾವುದೇ ಗಾಯಗಳಾಗಲ್ಲ, ಮೌಢ್ಯ ಎಂದುಕೊಂಡರೆ ಮೌಢ್ಯ, ಭಕ್ತಿ ಎಂದರೆ ಭಕ್ತಿ. ಈ ಭಾಗದಲ್ಲಿ ೩ ದಶಕಗಳಿಗಿಂತಲೂ ಹೆಚ್ಚಿನ ವರ್ಷದಿಂದ ಈ ಆಚರಣೆ ಜಾರಿಯಲ್ಲಿದೆ ಎನ್ನುತ್ತಾರೆ ಪರಿಸರಪ್ರೇಮಿ ಕೃಷ್ಣ. ಮೌಢ್ಯಾಚರಣೆಯಾದರೂ ಅವರವರ ಧಾರ್ಮಿಕ ಭಾವನೆಗಳಾದ್ದರಿಂದ ನಿರಾಂತಕವಾಗಿ ಇನ್ನು ಈ ರೀತಿಯ ಆಚರಣೆಗಳು ಇಲ್ಲಿ ಮುಂದುವರೆದಿದ್ದು, ಯುವ ಜನತೆ ಮಾರು ಹೋಗುತ್ತಿರುವುದು ಒಂದು ಅಚ್ಚರಿಯೇ ಸರಿ.