ಪಾಟ್ನಾ (ಬಿಹಾರ): ಬಿಹಾರದ ಸರನ್ ಕಳ್ಳಬಟ್ಟಿ ಸಾರಾಯಿ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬ ಸದಸ್ಯರಿಗೆ ಪರಿಹಾರ ನೀಡಲು ನಿರಾಕರಿಸಿದ ಸಿಎಂ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮತ್ತು ಮಿತ್ರಪಕ್ಷಗಳು ವಾಗ್ದಾಳಿ ನಡೆಸಿವೆ.
ಸಾರಾಯಿ ದುರಂತದಲ್ಲಿ ಮಂಗಳವಾರ ರಾತ್ರಿಯಿಂದ ಈವರೆಗೆ 30 ಜನ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯಾಡಳಿತ ದೃಢಪಡಿಸಿದೆ. ಈ ಘಟನೆ ಆರು ವರ್ಷಗಳ ಹಿಂದೆ ಸಾರಾಯಿ ನಿಷೇಧದ ನಂತರ ಬಿಹಾರದಲ್ಲಿ ಸಂಭವಿಸಿದ ಅತಿದೊಡ್ಡ ಸಾರಾಯಿ ದುರಂತವಾಗಿದೆ.
ಆದಾಗ್ಯೂ ಸಾವಿನ ಸಂಖ್ಯೆ 100 ಕ್ಕಿಂತ ಹೆಚ್ಚು ಎಂದು ಬಿಜೆಪಿ ಆರೋಪಿಸಿದೆ. ರಾಜ್ಯ ವಿಧಾನಸಭೆಯ ಒಳಗೆ ಮತ್ತು ರಾಜ್ಯಪಾಲ ಫಾಗು ಚೌಹಾಣ್ಗೆ ಸಲ್ಲಿಸಿದ ಮನವಿಯಲ್ಲಿ ಬಿಜೆಪಿ ಈ ಆರೋಪ ಮಾಡಿದೆ. ಎನ್ಡಿಎ ಪರ ಸಹಾನುಭೂತಿ ಹೊಂದಿರುವ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಡುವಿರೋಧಿ ಚಿರಾಗ್ ಪಾಸ್ವಾನ್ ಕೂಡ ಬಿಜೆಪಿಯ ಅಭಿಪ್ರಾಯ ಬೆಂಬಲಿಸಿದ್ದಾರೆ.
ನಾನು ಇಂದು ಸರನ್ಗೆ ಭೇಟಿ ನೀಡಿ ದುಃಖತಪ್ತ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದೇನೆ. ಕಳ್ಳಬಟ್ಟಿ ಸಾರಾಯಿಯಿಂದ ಉಂಟಾದ ಸಾವುಗಳ ಮಾಹಿತಿಯನ್ನು ಬಹಿರಂಗಪಡಿಸದಂತೆ ಮತ್ತು ಸಾವು ಬೇರಾವುದೋ ಕಾರಣಕ್ಕೆ ಆಗಿದೆ ಎಂದು ಜಗತ್ತಿಗೆ ಹೇಳುವಂತೆ ಆಡಳಿತವು ಕುಟುಂಬಸ್ಥರ ಮೇಲೆ ಒತ್ತಡ ಹಾಕುತ್ತಿರುವುದು ಆತಂಕಕಾರಿಯಾಗಿದೆ. ಏನಿಲ್ಲವೆಂದರೂ ಕನಿಷ್ಠ 200 ಜನ ಈ ಸಾರಾಯಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಚಿರಾಗ್ ಪಾಸ್ವಾನ್ ಮಾಧ್ಯಮಗಳಿಗೆ ತಿಳಿಸಿದರು.
ಮದ್ಯದ ಮೇಲಿನ ನಿಷೇಧವು ಗಾಂಧೀ ತತ್ವಗಳ ಮೇಲೆ ಆಧರಿತವಾಗಿದೆ. ಕಳ್ಳಬಟ್ಟಿ ಸಾರಾಯಿ ಸೇವಿಸುವವರು ಇದನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ಕೆಟ್ಟ ಕೆಲಸಕ್ಕಾಗಿ ಯಾವುದೇ ಪರಿಹಾರ ನೀಡಲಾಗದು ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದರು.
ಮಾಜಿ ಉಪ ಮುಖ್ಯಮಂತ್ರಿ ಮತ್ತು ಒಂದು ಕಾಲದಲ್ಲಿ ಕುಮಾರ್ ಅವರ ವಿಶ್ವಾಸಾರ್ಹ ವ್ಯಕ್ತಿ ಸುಶೀಲ್ ಕುಮಾರ್ ಮೋದಿ ಕೂಡ ಸರನ್ಗೆ ಪ್ರತ್ಯೇಕವಾಗಿ ಭೇಟಿ ನೀಡಿದರು ಮತ್ತು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡದ ಸರ್ಕಾರದ ಕ್ರಮವನ್ನು ಖಂಡಿಸಿದರು.
ಪಿಯೋಗೆ ತೋ ಮರೋಗೆ (ಕುಡಿದರೆ ಸಾಯುವುದು ಖಂಡಿತ) ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಸಾರಾಯಿ ದುರಂತದಲ್ಲಿ ಮೃತಪಟ್ಟ ಕುಟುಂಬದವರಿಗೆ ಪರಿಹಾರ ಮಾತ್ರವಲ್ಲದೆ ಅವರಿಗೆ ಪುನರ್ವಸತಿಯನ್ನೂ ನೀಡಬೇಕು ಎಂದು ಮಹಾಘಟಬಂಧನ್ ಸರ್ಕಾರವನ್ನು ಹೊರಗಿನಿಂದ ಬೆಂಬಲಿಸುವ ಸಿಪಿಐ (ಎಂಎಲ್) ಲಿಬರೇಶನ್ ಪಕ್ಷ ಆಗ್ರಹಿಸಿದೆ.
ಇದನ್ನೂ ಓದಿ: ಮದ್ಯ ಸೇವಿಸುವವರು ಖಂಡಿತಾ ಸಾಯ್ತಾರೆ ಎಂದ ನಿತೀಶ್ ಕುಮಾರ್