ಛಾಪ್ರಾ (ಬಿಹಾರ): ಗಾಯತ್ರಿ ಮಹಾಯಜ್ಞ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಇಬ್ಬರು ಮಹಿಳೆಯರು ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ಶುಕ್ರವಾರ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ದರಿಯಾಪುರದ ಮಸ್ತಿಚಕ್ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಮಹಾಯಜ್ಞದಲ್ಲಿ ಭಕ್ತರ ನಡುವೆ ನೂಕುನುಗ್ಗಲು ಉಂಟಾಗಿ ಈ ದುರಂತ ಜರುಗಿದೆ ಎಂದು ವರದಿಯಾಗಿದೆ.
ಮೃತರನ್ನು ಔರಂಗಾಬಾದ್ ಜಿಲ್ಲೆಯ ದೌದ್ನಗರ ನಿವಾಸಿಗಳಾದ ಕಲಿಯನ್ ದೇವಿ (50 ವರ್ಷ) ಮತ್ತು ಪಾರ್ವತಿ ದೇವಿ (63) ಎಂದು ಗುರುತಿಸಲಾಗಿದೆ. ಈ ಘಟನೆಯ ವಿಷಯ ತಿಳಿದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದರು. ಜೊತೆಗೆ ಪೊಲೀಸ್ ಸಿಬ್ಬಂದಿ ಜನರನ್ನು ನಿಯಂತ್ರಿಸಿದರು. ಈ ಕಾಲ್ತುಳಿತದಲ್ಲಿ ಗಾಯಗೊಂಡ ಹಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಅಮನ್ ಸಮೀರ್ ಪ್ರತಿಕ್ರಿಯಿಸಿ, ಕಾಲ್ತುಳಿತದಂತಹ ಯಾವುದೇ ಪರಿಸ್ಥಿತಿ ಇರಲಿಲ್ಲ. ಆದರೆ, ಇಂದು ಬೆಳಗ್ಗೆ ಮಹಾಯಜ್ಞದ ಗೇಟ್ ತೆರೆದಾಗ 100ಕ್ಕೂ ಹೆಚ್ಚು ಮಂದಿ ಏಕಕಾಲಕ್ಕೆ ಒಳ ಪ್ರವೇಶಿಸಿದ್ದಾರೆ. ಈ ವೇಳೆ, ಕೆಲವರು ಕೆಳಗಡೆ ಬಿದ್ದಿದ್ದಾರೆ. ಇದರಲ್ಲಿ ಇಬ್ಬರು ಮಹಿಳೆಯರು ಕೂಡ ಸೇರಿದ್ದರು. ಕೆಳಗಡೆ ಬಿದ್ದ ಬಳಿಕ ಅಲ್ಲಿಯೇ ಅಸ್ವಸ್ಥರಾಗಿದ್ದರು. ಇದರಿಂದ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತವು ಕಾಲ್ತುಳಿತದ ಪರಿಸ್ಥಿತಿಯನ್ನು ನಿರಾಕರಿಸಿದ್ದರೂ ಪ್ರತ್ಯಕ್ಷದರ್ಶಿಗಳು, ಹೆಚ್ಚಿನ ಜನಸಂದಣಿಯಿಂದಾಗಿ ಕಾಲ್ತುಳಿತ ಸಂಭವಿಸಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಯಾಗದಲ್ಲಿ ಪಾಲ್ಗೊಳ್ಳಲು ಔರಂಗಾಬಾದ್ ಜಿಲ್ಲೆಯ ಕಾನಾಪ್ನಿಂದ ಮಹಿಳೆಯರು ಬಂದಿದ್ದರು. ನಮ್ಮ ಗ್ರಾಮದಿಂದ 44 ರಿಂದ 45 ಮಂದಿ ಆಗಮಿಸಿದ್ದರು. ಸಾಕಷ್ಟು ಜನಸಂದಣಿ ಇತ್ತು. ಇದ್ದಕ್ಕಿದ್ದಂತೆ ಕಾಲ್ತುಳಿತ ಸಂಭವಿಸಿ, ಇಬ್ಬರು ಮಹಿಳೆಯರು ಗುಂಪಿನಲ್ಲಿ ಕೆಳಗಡೆ ಬಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ.
251 ಯಜ್ಞಕುಂಡಗಳ ಗಾಯತ್ರಿ ಮಹಾಯಜ್ಞವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಭಾಗವಹಿಸಲು ಬಿಹಾರ ಮಾತ್ರವಲ್ಲದೇ ದೇಶದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸುಮಾರು 25 ಸಾವಿರ ಜನರಿಗೆ ವಸತಿ, ಊಟದ ವ್ಯವಸ್ಥೆ ಜೊತೆಗೆ ಸಾರಿಗೆ ಮತ್ತಿತರ ಸೌಲಭ್ಯ ಕಲ್ಪಿಸಲಾಗಿತ್ತು. ಇಂದು ಬೆಳಗ್ಗೆ ಯಾಗಕ್ಕಾಗಿ ಆಯೋಜಕರು ಗೇಟ್ ತೆರೆಯುವಷ್ಟರಲ್ಲಿ ಗೇಟ್ ಬಳಿ ಅಪಾರ ಜನಸ್ತೋಮ ನೆರೆದಿತ್ತು ಎಂದು ತಿಳಿದು ಬಂದಿದೆ.
ಕಳೆದ ವಾರ ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲೂ ಇಂತಹದ್ದೇ ಘಟನೆಯೊಂದು ನಡೆದಿತ್ತು. ದುರ್ಗಾಪೂಜೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ 5 ವರ್ಷದ ಮಗು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ದುರ್ಗಾಪೂಜೆ ವೇಳೆ ಕಾಲ್ತುಳಿತ : ಮಗು, ಇಬ್ಬರು ಮಹಿಳೆಯರು ಸೇರಿ ಮೂವರ ಸಾವು