ಹೈದರಾಬಾದ್ : ಮಗಳ ಮದುವೆಗೆಂದು ಮಾಡಿದ ಸಾಲದ ಭಾರ ಹೆಚ್ಚಾಗಿ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರೀಂನಗರ ಜಿಲ್ಲೆಯ ಚೊಪ್ಪದಂಡಿ ಮಂಡಲದ ಕಟ್ನೆಂಪಲ್ಲಿ ಎಂಬಲ್ಲಿ ಸೋಮವಾರ ನಡೆದಿದೆ.
ಭೈರಿ ಶಂಕಯ್ಯ(55), ಜಮುನಾ(50) ಹಾಗೂ ಪುತ್ರ ಶ್ರೀಧರ್ ಮೃತ ದುರ್ದೈವಿಗಳು. ಭೈರಿ ಶಂಕರಯ್ಯ ಕುಟುಂಬದಲ್ಲಿ ಕಳೆದ ಮೂರು ತಿಂಗಳ ಹಿಂದಷ್ಟೇ ಮಗಳ ಮದುವೆ ಕಾರ್ಯಕ್ರಮ ನಡೆದಿತ್ತು. ಮಗಳ ಮದುವೆಗಾಗಿ ಕುಟುಂಬಸ್ಥರು ಸಾಲ ಮಾಡಿಕೊಂಡಿದ್ದರು. ಇದನ್ನು ತೀರಿಸಲಾಗದೇ ಮನನೊಂದಿದ್ದರು.
ಇದರಿಂದ ಸೋಮವಾರ ಕುಟುಂಬದ ಮೂವರೂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಕುಟುಂಬಸ್ಥರು ನೇಣು ಬಿಗಿದುಕೊಂಡಿದ್ದನ್ನು ಕಂಡ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಹಿಂಬಾಗಿಲಿನಿಂದ ಪ್ರವೇಶಿಸಿ ಮೃತದೇಹಗಳನ್ನು ಕುಣಿಕೆಯಿಂದ ಇಳಿಸಿ, ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.