ರಾಂಚಿ (ಜಾರ್ಖಂಡ್): ಜಾರ್ಖಂಡ್ ರಾಜಧಾನಿ ರಾಂಚಿಯಿಂದ 180 ಕಿಲೋ ಮೀಟರ್ ಸಾಗಿದರೆ ಸಿಗುವ ಗಿರಿಡಿಹ್ ಪ್ರದೇಶ ಶಿಖರ್ಜಿ ಜೈನ ದೇವಾಲಯ ಹಾಗೂ ಗಣಿಗಳಿಂದಲೇ ದೇಶದಲ್ಲಿ ಪ್ರಸಿದ್ಧಿಯಾಗಿದೆ. ಆದರೆ, ಇದೇ ಗ್ರಾಮದ ಇಬ್ಬರು ಅವಳಿ ಸಹೋದರಿಯರು ದೇಶದೆಲ್ಲೆಡೆ ಈಗ ಪರಿಚಿತರಾಗುತ್ತಿದ್ದಾರೆ. ಇಲ್ಲಿನ ಕಾವ್ಯ ಮತ್ತು ನವ್ಯಾ ಎಂಬ ಈ ಇಬ್ಬರು ಪುಟಾಣಿಗಳು ಟೇಕ್ವಾಂಡೋ ಕ್ರೀಡೆಯಲ್ಲಿ ಹೆಸರು ಮಾಡುತ್ತಿದ್ದಾರೆ.
ಆಟಿಕೆಗಳೊಂದಿಗೆ ಕಾಲ ಕಳೆಯುವ ವಯಸ್ಸಿನಲ್ಲಿ ಈ ಇಬ್ಬರು ಪುಟಾಣಿಗಳು ಟೇಕ್ವಾಂಡೋದಲ್ಲಿ ಪರಿಣತಿ ಪಡೆಯಬೇಕು ಅಂತ ಹಂಬಲಿಸಿದ್ದಾರೆ. ಕೇವಲ 6ನೇ ವಯಸ್ಸಿನಲ್ಲಿ ಇಬ್ಬರ ಹುಮ್ಮಸ್ಸು ಎಂತಹವರಿಗೂ ಅಚ್ಚರಿ ಉಂಟುಮಾಡುತ್ತೆ. ಇದಿಷ್ಟೇ ಅಲ್ಲ ಕಾವ್ಯ ಈಗಾಗ್ಲೇ ರಾಷ್ಟ್ರಮಟ್ಟದ ಜೂನಿಯರ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಸಹ ಗೆದ್ದಿದ್ದು, ರಾಷ್ಟ್ರೀಯ ಚಾಂಪಿಯನ್ಶಿಪ್ಗೂ ಆಯ್ಕೆಯಾಗಿದ್ದಾಳೆ. ಮುಂದೊಂದು ದಿನ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬುದು ಪುಟಾಣಿಗಳ ಮಹದಾಸೆಯಂತೆ.
ಈ ಪುಟಾಣಿಗಳ ತಂದೆ ಪಂಕಜ್ ಕುಮಾರ್ ಸ್ವತಃ ಪಿಸ್ತೂಲ್ ಶೂಟಿಂಗ್ ಆಟಗಾರರಾಗಿದ್ದಾರೆ.
ಈ ಅವಳಿ ಪುಟಾಣಿಗಳಲ್ಲಿ ಇನ್ನಿಲ್ಲದ ಉತ್ಸಾಹವಿದೆ. ಇಬ್ಬರು ಒಂದರ ನಂತರ ಒಂದರಂತೆ ಅನೇಕ ಪದಕಗಳನ್ನು ತಮ್ಮ ಹೆಸರಲ್ಲಿ ಪಡೆದಿದ್ದಾರೆ. ಮುಂದೆ ದೇಶಕ್ಕಾಗಿ ಆಡುವ ಹಂಬಲವಿದ್ದು, ಅಲ್ಲಿಯೂ ಪದಕ ಜಯಿಸಲು ಕಾಯುತ್ತಿದ್ದಾರೆ. ಆದರೆ, ಈ ಪುಟಾಣಿಗಳನ್ನ ಮಾಸ್ಟರ್ ಆಗಿ ಮಾಡುವಲ್ಲಿ ತರಬೇತುದಾರನ ಪರಿಶ್ರಮ ಮೆಚ್ಚಬೇಕಿದೆ.
ಈ ಇಬ್ಬರೂ ಸಹೋದರಿಯರು ತಮ್ಮ ಕಠಿಣ ಪರಿಶ್ರಮದಿಂದ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಹೆಸರು ತರುತ್ತಿದ್ದಾರೆ. ಬಾಲಕಿಯರಿಬ್ಬರೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವ ದಿನಗಳು ದೂರವಿಲ್ಲ.