ಪೂರ್ವ ಗೋದಾವರಿ(ಆಂಧ್ರಪ್ರದೇಶ): ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ವಿಹಾರಕ್ಕೆ ತೆರಳಿದ್ದ ಕುಟುಂಬವೊಂದರಲ್ಲಿ ದುಃಖ ಆವರಿಸಿದೆ. ಮಗನನ್ನು ಕಾಪಾಡಲು ತೆರಳಿದ ತಂದೆ, ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಘಟನೆ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಕೊಡಗುಡೆಂ ಜಿಲ್ಲೆಯ ದಮ್ಮಪೇಟೆಯ ಭದ್ರಾದ್ರಿ ಕಕ್ಕಿರಾಳ ಪ್ರದೇಶದ ಪುರುಷೋತ್ತಮ್ ಸುಮಾರು 13 ವರ್ಷಗಳ ಹಿಂದೆ ಆಶ್ವರಪೇಟ ಮಂಡಲದ ನಾರಾಯಣಪುರದ ಸಂತೋಷಿನಿ ಎಂಬಾಕೆಯೊಂದಿಗೆ ವಿವಾಹವಾಗಿತ್ತು. ಬುಧವಾರ ಅವರ ವಿವಾಹ ವಾರ್ಷಿಕೋತ್ಸವ ಸಮಾರಂಭ.
ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ದಂಪತಿ ತಮ್ಮ ಮಕ್ಕಳಾದ 12 ವರ್ಷದ ದಿಲೀಪ್ ಮತ್ತು 10 ವರ್ಷದ ದೀಪಕ್ನೊಡನೆ, ವಿಹಾರಕ್ಕಾಗಿ ಚಿಂತೂರು ವಲಯದ ಮೋಟುಗುಡೆಂ ಬಳಿಯ ಜಲಪಾತಕ್ಕೆ ಬುಧವಾರ ತೆರಳಿದ್ದರು.
ಜಲಪಾತದ ಕೆಳಗೆ ಖುಷಿಯಾಗಿ ಕಾಲ ಕಳೆಯುತ್ತಿರುವ ವೇಳೆ ಹಿರಿಯ ಮಗ ದೀಪಕ್ ನೀರಿನಲ್ಲಿ ಮುಳುಗಿದ್ದಾನೆ. ಈ ವೇಳೆ, ನೀರಿಗೆ ಇಳಿದ ಪುರುಷೋತ್ತಮ್ ಮಗನನ್ನು ರಕ್ಷಿಸಿ, ಪತ್ನಿ ಸಂತೋಷಿಗೆ ನೀಡಿದ್ದಾರೆ. ಆದರೆ ನೀರಿನ ರಭಸಕ್ಕೆ ಮೇಲಕ್ಕೆ ಬರಲಾಗದೇ ಪುರುಷೋತ್ತಮ್ ಕೊಚ್ಚಿ ಹೋಗಿದ್ದಾರೆ.
ಇದನ್ನೂ ಓದಿ: ಜಮೀನು ವಿವಾದ: ಮೂವರನ್ನು ಸಜೀವವಾಗಿ ಸುಡಲು ಯತ್ನ... Viral video
ಮಾಹಿತಿ ತಿಳಿದ ಸ್ಥಳೀಯರು ಸುಮಾರು ಎರಡು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಡೆಸಿದ್ದು, ಪುರುಷೋತ್ತಮ್ ಶವವನ್ನು ಹೊರತೆಗೆದಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚಿಂತೂರು ಆಸ್ಪತ್ರೆಗೆ ರವಾನಿಸಿದ್ದಾರೆ.