ಗುಂಟೂರು : ವಿಶ್ವ ದಾಖಲೆ ನಿರ್ಮಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶದ ಶಿಲ್ಪಿಯೊಬ್ಬರು ಸರಿಸುಮಾರು 75,000 ಕಬ್ಬಿಣದ ಬೋಲ್ಟ್ನಿಂದ ಮಹಾತ್ಮ ಗಾಂಧಿಯ ಪ್ರತಿಮೆ ನಿರ್ಮಿಸಿದ್ದಾರೆ. ಗುಂಟೂರು ಜಿಲ್ಲೆಯ ತೆನಾಲಿ ಪಟ್ಟಣದಲ್ಲಿ ನಿರ್ಮಿತವಾದ 10 ಅಡಿಗಳ ಪ್ರತಿಮೆಯ ಕಲಾ ಕೃತಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಿನ್ನೆಸ್ ಪುಸ್ತಕ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರುವ ಮೂಲಕ ತಮ್ಮ ಪಟ್ಟಣಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದು ಕೊಡಲು ಮುಂದಿನ ದಿನಗಳಲ್ಲಿ ಶ್ರಮಿಸುವುದಾಗಿ ಶಿಲ್ಪಿ ಕತುರಿ ವೆಂಕಟೇಶ್ವರ ರಾವ್ ತಿಳಿಸಿದರು. 2018ರಲ್ಲಿ ಚೆನ್ನೈ ನಗರದಲ್ಲಿ ಸ್ಥಾಪಿತವಾದ ಮಾಜಿ ಸಿಎಂ ದಿವಂಗತ ಎಂ ಕರುಣಾನಿಧಿ ಅವರ ಪ್ರತಿಮೆಗಳನ್ನು ತಯಾರಿಸಿ ರಾವ್ ಸುದ್ದಿಯಲ್ಲಿದ್ದರು.
ಅಷ್ಟೇ ಅಲ್ಲ, ಭಾರತದ ಪ್ರಸಿದ್ಧ ನಾಯಕರಾದ ಎನ್.ಟಿ. ರಾಮರಾವ್, ಬಿ.ಆರ್. ಅಂಬೇಡ್ಕರ್, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಪ್ರತಿಮೆಗಳು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ ಎಂದು ಹೇಳಲಾಗಿದೆ. ತಲೆಮಾರುಗಳಿಂದ ಪ್ರತಿಮೆ ತಯಾರಿಸುವಲ್ಲಿ ನಿರತರಾಗಿರುವ ಇವರಿಗೆ 'ಶಿಲ್ಪ ರತ್ನ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.