ನವದೆಹಲಿ : ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಇಂದು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಕ್ಕರೆ ಬೆಲೆ ಹಾಗೂ ಪೆಟ್ರೋಲ್ನಲ್ಲಿ ಎಥೆನಾಲ್ ಬೆರೆಸುವಿಕೆಯ ಕುರಿತು ಚರ್ಚಿಸಿದರು. ಪವಾರ್ ಅವರೊಂದಿಗೆ ಸಕ್ಕರೆ ಕಾರ್ಖಾನೆಗಳ ಸಹಕಾರ ಒಕ್ಕೂಟದ ಅಧ್ಯಕ್ಷ ಜಯಪ್ರಕಾಶ್ ದಂಡೇಗಾಂವ್ಕರ್ ಮತ್ತು ಎನ್ಸಿಪಿಯ ರಾಯಗಢದ ಸಂಸದರು ಇದ್ದರು.
ಅಮಿತ್ ಶಾ ಅವರನ್ನು ಭೇಟಿ ಮಾಡಿದ ನಂತರ ಪವಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಕ್ಕರೆಯ ಪ್ರಸ್ತುತ ಮಾರಾಟದ ಬೆಲೆಯ ಕುರಿತು ಚರ್ಚಿಸಲಾಗಿದೆ. ಈ ಬೆಲೆ ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ಇದ್ದು, ಸರ್ಕಾರ ನೋಡಿಕೊಳ್ಳುವಂತೆ ವಿನಂತಿಸಲಾಗಿದೆ ಎಂದರು.
ಮಾಜಿ ಕೃಷಿ ಸಚಿವರಾಗಿದ್ದ ಪವಾರ್ ಅವರು ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವ ಅಗತ್ಯತೆಯ ಬಗ್ಗೆಯೂ ಮಾತನಾಡಿರುವುದಾಗಿ ಹೇಳಿದರು. ಸಕ್ಕರೆ ವಲಯಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಎನ್ಸಿಪಿ ಮುಖ್ಯಸ್ಥ ಪವಾರ್ ಹೇಳಿದ್ದಾರೆ.