ನವದೆಹಲಿ: ಯುವತಿಯ ಮೇಲೆ ಅತ್ಯಾಚಾರ ಎಸಗಿದ ಗಂಭೀರ ಪ್ರಕರಣ ಸಂಬಂಧ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೊಬ್ಬರ ಮೇಲೆ ನವದೆಹಲಿ ಪೊಲೀಸರು ಭಾನುವಾರ ಎಫ್ಐಆರ್ ದಾಖಲಿಸಿದ್ದಾರೆ. ಸಂತ್ರಸ್ತೆ(32) ಯುಪಿಎಸ್ ಪರೀಕ್ಷಾರ್ಥಿಯಾಗಿದ್ದಾರೆ. 'ಆರೋಪಿಯನ್ನು ನಾನು 2013ರಲ್ಲಿ ಭೇಟಿಯಾಗಿದ್ದೆ. ನಂತರ ನನ್ನ ಜೊತೆ ಸ್ನೇಹ ಸಂಬಂಧ ಬೆಳೆಸಿಕೊಂಡರು. ನನ್ನ ಮೇಲೆ ದೈಹಿಕ ದೌರ್ಜನ್ಯ ಎಸಗಿದ ಅವರು ಮದುವೆಯಾಗುವ ಭರವಸೆ ನೀಡಿದ್ದರು' ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಯುವತಿ ನೀಡಿರುವ ದೂರಿನ ಆಧಾರದಲ್ಲಿ ಅತ್ಯಾಚಾರ ಸಂಬಂಧಿತ ಐಪಿಸಿ ಕಲಂಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 'ಪ್ರಕರಣದ ತನಿಖೆ ನಡೆಯುತ್ತಿದೆ, ಸದ್ಯಕ್ಕೆ ಆರೋಪಿಯನ್ನು ಬಂಧಿಸಿಲ್ಲ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. 'ಇತ್ತೀಚೆಗೆ ನನ್ನ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಯಿತು. ಈ ಸಂದರ್ಭದಲ್ಲಿಯೂ ಅವರು ವಿನಾಕಾರಣ ಹಲ್ಲೆ ನಡೆಸಿದರು, ಅವಾಚ್ಯ ಪದಗಳಿಂದ ನಿಂದಿಸಿದರು. ನಾನು ಜೋರಾಗಿ ಅಳುತ್ತಿದ್ದೆ. ನನಗೆ ಸಾಂತ್ವನ ಹೇಳುವ ಬದಲಾಗಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಇದಾದ ಬಳಿಕ ಕ್ಷಮೆ ಯಾಚಿಸಿದರು. ನನ್ನನ್ನು ಮದುವೆಯಾಗುವುದಾಗಿ ಹೇಳಿದರು' ಎಂದು ಸಂತ್ರಸ್ತೆ ದೂರಿನಲ್ಲಿ ನಡೆದ ಘಟನೆಯೊಂದನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ಮೊಬೈಲ್ ಶೋರೂಂನಲ್ಲಿ ಅಸಭ್ಯ ವರ್ತನೆ: ಒಂದನೇ ಮಹಡಿಯಿಂದ ಜಿಗಿದ ಯುವತಿ