ಚೆನ್ನೈ(ತಮಿಳುನಾಡು) : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಇಂದು ಒಂದು ತಿಂಗಳ ಪೆರೋಲ್ ಮೇಲೆ ಬಿಡುಗಡೆಯಾಗಲಿದ್ದಾರೆ ಎಂದು ನಳಿನಿ ಪರ ವಕೀಲ ರಾಧಾಕೃಷ್ಣನ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ರಾಧಾಕೃಷ್ಣನ್, ಪೆರೋಲ್ ಮೇಲೆ ಬಿಡುಗಡೆಯಾಗುವ ಕುರಿತು ರಾಜ್ಯ ಸರ್ಕಾರದಿಂದ ಗುರುವಾರ ಅನುಮತಿ ಪಡೆದಿರುವ ನಳಿನಿ, ಶ್ಯೂರಿಟಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಇಂದು ಬಿಡುಗಡೆ ಆಗಲಿದ್ದಾರೆ ಎಂದರು.
ಅನಾರೋಗ್ಯದಿಂದ ಬಳಲುತ್ತಿರುವ ಅವರ ತಾಯಿ ಪದ್ಮಾ ಪದೇಪದೆ ಮನವಿ ಮಾಡಿದ ನಂತರ ಸರ್ಕಾರ, ನಳಿನಿ ಅವರಿಗೆ ಒಂದು ತಿಂಗಳ ಪೆರೋಲ್ ನೀಡಿದೆ ಎಂದು ತಮಿಳುನಾಡು ಸರ್ಕಾರ ಗುರುವಾರ ಮದ್ರಾಸ್ ಹೈಕೋರ್ಟ್ಗೆ ತಿಳಿಸಿತ್ತು.
1991ರ ಮೇ 21ರಂದು ತಮಿಳುನಾಡಿನಲ್ಲಿ ಚುನಾವಣೆ ರ್ಯಾಲಿಗೆ ಆಗಮಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನ ಹತ್ಯೆ ಮಾಡಲಾಗಿತ್ತು. ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಒಟ್ಟು 14 ಜನರು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ನಳಿನಿ, ಅವರ ಪತಿ ಮುರುಗನ್ ಸೇರಿ ಒಟ್ಟು ಏಳು ಮಂದಿಯನ್ನ ಕೋರ್ಟ್ ಅಪರಾಧಿಗಳು ಎಂದು ಘೋಷಿಸಿತ್ತು.
ಎಲ್ಲರಿಗೂ ಗಲ್ಲು ಶಿಕ್ಷೆ ಪ್ರಕಟವಾಗಿತ್ತು. ನಂತರ ಇದನ್ನ ಜೀವಿತಾವಧಿ ಶಿಕ್ಷೆಯಾಗಿ ಮಾರ್ಪಾಟು ಮಾಡಲಾಗಿದೆ. ಸದ್ಯಕ್ಕೆ ನಳಿನಿ ಶ್ರೀಹರನ್ ವೆಲ್ಲೂರಿನ ಮಹಿಳಾ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.