ಭರತ್ಪುರ (ರಾಜಸ್ಥಾನ) : ಭರತ್ಪುರದ ಅಟ್ಟಾರಿ ಗ್ರಾಮದ ರೈತನ ಮಗನಾದ ಭಜನ್ಲಾಲ್ ಶರ್ಮಾ ಅವರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಡಿ.15 ರಂದು ಅಧಿಕಾರ ಸ್ವೀಕರಿಸಿದರು. ನೂತನ ಮುಖ್ಯಮಂತ್ರಿಗಳು ಆಧ್ಯಾತ್ಮಿಕ ವ್ಯಕ್ತಿಯಾಗಿದ್ದು, ದಾನ ಮತ್ತು ಮಾನವೀಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ನೆರೆಹೊರೆಯವರಾದ ಪ್ರಭಾಕರ ಶರ್ಮಾ, ಭಜನ್ ಲಾಲ್ ಅವರು ಆಧ್ಯಾತ್ಮಿಕ ಸ್ವಭಾವದ ವ್ಯಕ್ತಿಯಾಗಿದ್ದು, ಗಿರಿರಜ್ಜಿ ದೇವರಲ್ಲಿ (Lord Girirajji) ಅಪಾರ ನಂಬಿಕೆ ಹೊಂದಿದ್ದಾರೆ. ಅವರು ತಿಂಗಳಿಗೆ ಮೂರ್ನಾಲ್ಕು ಬಾರಿ ಪೂಂಚ್ರಿ ಕಾ ಲೋಥಾದಲ್ಲಿರುವ ಗಿರಿರಜ್ಜಿ ಮತ್ತು ಶ್ರೀನಾಥ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಮತ್ತು ತಮ್ಮ ಹೊಲದಲ್ಲಿ ಬೆಳೆಯುವ ಧಾನ್ಯಗಳನ್ನು ಹಸುಗಳಿಗೆ ದಾನ ಮಾಡುತ್ತಾರೆ. ಅಷ್ಟೇ ಅಲ್ಲದೆ, ಬಿಜೆಪಿ ನಾಯಕರು ಶ್ರೀನಾಥ ದೇವಸ್ಥಾನ ಟ್ರಸ್ಟ್ನ ಸದಸ್ಯರೂ ಆಗಿದ್ದು, ದೇವಸ್ಥಾನದಲ್ಲಿ ಭಕ್ತರಿಗಾಗಿ ಪ್ರತಿ ತಿಂಗಳು ಸಮುದಾಯದ ಹಬ್ಬವನ್ನು ಆಯೋಜಿಸುತ್ತಾರೆ ಎಂದು ಹೇಳಿದರು.
ಭಜನ್ಲಾಲ್ ಶರ್ಮಾ ಅವರು ಗ್ರಾಮದಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದು, ರಾಬಿ ಮತ್ತು ಖಾರಿಫ್ ಎರಡೂ ಬೆಳೆಗಳನ್ನು ಬೆಳೆಯಲಾಗುತ್ತದೆ. ಮತ ಎಣಿಕೆಗೆ ಮುಂಚೆಯೇ ಡಿಸೆಂಬರ್ 1 ರಂದು ಮುಖ್ಯಮಂತ್ರಿಗಳು ಪೂಂಚ್ರಿ ಕಾ ಲೋಥಾದಲ್ಲಿರುವ ಶ್ರೀನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭಗವಾನ್ ಶ್ರೀನಾಥ ಮತ್ತು ಗಿರಿರಜ್ಜಿ ದೇವರ ದರ್ಶನ ಪಡೆದಿದ್ದರು ಎಂದು ತಿಳಿಸಿದರು.
ಮುಖ್ಯಮಂತ್ರಿ ಅವರು ಎಲ್ಲಾ ಧರ್ಮ ಮತ್ತು ಎಲ್ಲಾ ಜಾತಿಯ ಜನರನ್ನು ಒಟ್ಟಿಗೆ ಕರೆದೊಯ್ಯುತ್ತಾರೆ, ಎಲ್ಲರನ್ನು ಸಮಾನತೆಯಿಂದ ಕಾಣುತ್ತಾರೆ ಎಂದ ಪ್ರಭಾಕರ ಶರ್ಮಾ, ಭಜನಲಾಲ್ ಶರ್ಮಾ ಅವರು 2000 ರಲ್ಲಿ ಅತ್ತಾರಿ ಗ್ರಾಮದ ಸರಪಂಚ್ ಆಗಿದ್ದಾಗ ಗ್ರಾಮದ ಎಲ್ಲಾ ಜಾತಿಯ ಜನರನ್ನು ಸಮಾನವಾಗಿ ನೋಡುತ್ತಿದ್ದರು ಮತ್ತು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಮುಖ್ಯಮಂತ್ರಿಯಾಗಿ ಪ್ರಮಾಣವಚನಕ್ಕೂ ಮುನ್ನ ಭಜನ್ಲಾಲ್ ಶರ್ಮಾ ಪೂಜೆ, ಪ್ರಾರ್ಥನೆ
56 ವರ್ಷದ ಭಜನ್ ಲಾಲ್ ಶರ್ಮಾ ಅವರು ಸರಪಂಚ್ ಆಗಿ ನೇಮಕವಾದ ಮೂರು ದಶಕಗಳ ಬಳಿಕ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಇದೇ ಡಿಸೆಂಬರ್ 15 ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಜೈಪುರದ ಸಂಗನೇರ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ರಾಜಸ್ಥಾನದಲ್ಲಿ ಈ ಬಿಜೆಪಿ ಅಧಿಕಾರ: ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮೂರು ರಾಜ್ಯಗಳಲ್ಲಿ ಜಯ ಸಾಧಿಸಿದೆ. ರಾಜಸ್ಥಾನದ 200 ವಿಧಾನಸಭೆ ಕ್ಷೇತ್ರಗಳ ಪೈಕಿ 115 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ 69 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತಿದೆ.