ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸಿಎಂ ಪಿಣರಾಯಿ ವಿಜಯನ್ ಮತ್ತು ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕರು ಆರೋಪಗಳ ಸುರಿ ಮಳೆಯನ್ನೇ ಹರಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಸಿಎಂ ಪಿಣರಾಯಿ ಅವರು ಸಾರ್ವಜನಿಕ ಭಾಷಣಗಳಲ್ಲಿ ಒಬ್ಬರಿಗೊಬ್ಬರು ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಿದ್ದಾರೆ. ಇದರಿಂದ ಯಾವುದೇ ಲಾಭವಿಲ್ಲ. ಕೇರಳದ ಜನರಿಗೆ ಉತ್ತರಗಳು ಬೇಕೇ ಹೊರತು ಪ್ರಶ್ನೆಗಳಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಮತ್ತು ಅಮಿತ್ ಶಾ ಅವರ ಬಳಿ ಯಾವುದಕ್ಕೂ ಉತ್ತರವಿಲ್ಲ. ಶಾ ಅವರು ಕೇಳಿದ ಪ್ರಶ್ನೆಗಳಿಗೆ ಸಿಎಂ ಉತ್ತರಿಸಬೇಕು. ಆದರೆ ಜನರನ್ನು ಮೋಸಗೊಳಿಸಲು ಬಿಜೆಪಿ ಮತ್ತು ಸಿಪಿಎಂ ಪ್ರಶ್ನೆಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ಪ್ರಶ್ನೆಗಳಲ್ಲಿ ಸೂಚಿಸಲಾದ ಆರೋಪಗಳ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಚಾಂಡಿ ಒತ್ತಾಯಿಸಿದರು.
ಬಳಿಕ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿಥಾಲಾ ಮಾತನಾಡಿ, ಚಿನ್ನ ಕಳ್ಳ ಸಾಗಣೆಕೆಗೆ ಸಂಬಂಧಿಸಿದಂತೆ ನಡೆದ ನಿಗೂಢ ಕೊಲೆ ಕುರಿತಂತೆ ಅಮಿತ್ ಶಾ ಬಹಿರಂಗಪಡಿಸಬೇಕು. ದೂರು ಇದ್ದರೆ ಅದನ್ನು ತನಿಖೆ ಮಾಡಲಾಗುವುದು ಎಂದು ಹೇಳುವ ಬದಲು ಕೊಲೆ ನಡೆದಿದೆಯೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು. ಕೇಂದ್ರ ಗೃಹ ಸಚಿವರಿಗೆ ಅಂತಹ ಮಾಹಿತಿ ಬಂದಿದ್ದರೆ ಅವರು ಅದನ್ನು ಕೇರಳದ ಜನರಿಗೆ ಬಹಿರಂಗಪಡಿಸಬೇಕು. ಕೋಮುವಾದದ ವ್ಯಕ್ತಿತ್ವವಾಗಿರುವ ಷಾ, ಕೇರಳದಲ್ಲಿ ತನ್ನನ್ನು ದೇವದೂತನಾಗಿ ನಿರೂಪಿಸುವ ಅಗತ್ಯವಿಲ್ಲ ಎಂದು ಚೆನ್ನಿತಾಲಾ ಹೇಳಿದರು.
ಸಿಎಂ, ಸ್ಪೀಕರ್ ಮತ್ತು ಇತರ ಮಂತ್ರಿಗಳ ವಿರುದ್ಧ ಹೆಚ್ಚಿನ ತನಿಖೆ ಏಕೆ ಪ್ರಾರಂಭಿಸಿಲ್ಲ ಎಂದು ಅಮಿತ್ ಶಾ ಸ್ಪಷ್ಟಪಡಿಸಬೇಕು. ಸೆಕ್ಷನ್ 164 ರ ಪ್ರಕಾರ ಅವರ ವಿರುದ್ಧ ಸಾಕ್ಷಿಯಾಗಿ ಹೇಳಿಕೆ ದೊರೆತಿದೆ. ಇದು ಸಿಪಿಎಂ ಮತ್ತು ಬಿಜೆಪಿ ನಡುವಿನ ಅಪವಿತ್ರ ಸಂಬಂಧವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಈ ರೀತಿ ಮಾಡುವುದರಿಂದ ಕೇರಳದಲ್ಲಿ ಬಿಜೆಪಿಗೆ ಒಂದು ಸ್ಥಾನ ಕೂಡ ಸಿಗುವುದಿಲ್ಲ ಎಂದರು.
ಸಿಎಂ ಪಿಣರಾಯಿ ವಿಜಯನ್ ಅವರ ಧರ್ಮದೋಮ್ ಭಾಷಣವು ಬಿಜೆಪಿ ಮತ್ತು ಸಿಪಿಎಂ ನಡುವಿನ ಒಳ ಒಪ್ಪಂದವನ್ನು ಮುಚ್ಚಿಹಾಕುವ ನಿರರ್ಥಕ ಪ್ರಯತ್ನವಾಗಿದೆ. ಅಮಿತ್ ಷಾ ಅವರು ಶಖುಮುಖಂನಲ್ಲಿ ಮಾಡಿದ ಭಾಷಣ, ಧರ್ಮದೋಮ್ನಲ್ಲಿ ಸಿಎಂ ಭಾಷಣದ ಮತ್ತೊಂದು ಆವೃತ್ತಿಯಾಗಿದೆ. ಇಬ್ಬರೂ ತಿಳಿದಂತೆ ಪರಸ್ಪರ ಪ್ರಶ್ನೆಗಳನ್ನು ಎತ್ತುತ್ತಿದ್ದರು ಎಂದು ಕೇರಳ ಪ್ರದೇಶದ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್ ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಪಿಣರಾಯಿ ಪರಸ್ಪರ ಹೊಗಳಿಕೊಂಡಿರುವುದಕ್ಕೆ ಅನೇಕ ಘಟನೆಗಳು ನಡೆದಿದ್ದು, ಇದಕ್ಕೆ ಕೇರಳದ ಜನತೆ ಸಾಕ್ಷಿಯಾಗಿದ್ದಾರೆ. ಕಣ್ಣೂರು ವಿಮಾನ ನಿಲ್ದಾಣವನ್ನು ಅಧಿಕೃತವಾಗಿ ತೆರೆಯುವ ಮೊದಲು ಅಮಿತ್ ಷಾಗೆ ಯಾರು ರೆಡ್ ಕಾರ್ಪೆಟ್ ಹಾಕಿದ್ದಾರೆ ಎಂಬುದರ ಬಗ್ಗೆಯೂ ಜನ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕರು ಸಿಎಂ ಮತ್ತು ಪಿಎಂ ವಿರುದ್ಧ ಹರಿಹಾಯ್ದಿದ್ದಾರೆ.