ಪುರಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪತ್ನಿ ಕವಿತಾ ಅವರೊಂದಿಗೆ ಇಂದು ಬೆಳಗ್ಗೆ ಪುರಿ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಬೆಳಗ್ಗೆ ಶ್ರೀಮಂದಿರದಲ್ಲಿ ಪೂಜೆ ಸಲ್ಲಿಸಿದರು. ರತ್ನ ಸಿಂಹಾಸನಕ್ಕೆ ಪ್ರವೇಶಿಸುವ ಮೂಲಕ ರತ್ನ ಸಿಂಹಾಸನ ಪ್ರವೇಶಿಸಿದ ಮೊದಲ ವಿವಿಐಪಿ ಎಂಬ ಹೆಗ್ಗಳಿಕೆಗೆ ರಾಮನಾಥ್ ಕೋವಿಂದ್ ಪಾತ್ರರಾದರು. 2015 ರಿಂದ ರತ್ನ ಸಿಂಹಾಸನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಇಂದು ದೇವಾಲಯಕ್ಕೆ ರಾಷ್ಟ್ರಪತಿ ಆಗಮನ ಹಿನ್ನೆಲೆ ಅವರ ಭೇಟಿಯ ಸಮಯದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಪುರಿ ಗಜಪತಿ ಮಹಾರಾಜ ದಿಬ್ಯಸಿಂಗ್ ದೇಬ್ ಮತ್ತು ಎಸ್ಜೆಟಿಎ ಮುಖ್ಯ ಆಡಳಿತಾಧಿಕಾರಿ ಕ್ರಿಶನ್ ಕುಮಾರ್ ರಾಷ್ಟ್ರಪತಿ ಮತ್ತು ಅವರ ಕುಟುಂಬವನ್ನು ದೇವಾಲಯಕ್ಕೆ ಸ್ವಾಗತಿಸಿದರು.
ರಾಷ್ಟ್ರಪತಿಯಾದ ನಂತರ ಜಗನ್ನಾಥ ದೇವಸ್ಥಾನಕ್ಕೆ ಕೋವಿಂದ್ ಅವರ ಎರಡನೇ ಭೇಟಿ ಇದಾಗಿದೆ. ಮಾರ್ಚ್ 18, 2018 ರಂದು ಕೋವಿಂದ್ ಜಗನ್ನಾಥನ ದರ್ಶನ ಪಡೆದಿದ್ದರು.
ವೇಳಾಪಟ್ಟಿಯ ಪ್ರಕಾರ, ರಾಷ್ಟ್ರಪತಿಗಳು ಬೆಳಗ್ಗೆ 9.45 ಕ್ಕೆ ಜಗನ್ನಾಥ ದೇವಾಲಯದಿಂದ ಹೊರಟು ಸೂರ್ಯ ದೇವಾಲಯಕ್ಕೆ ಭೇಟಿ ನೀಡಲು ಹೆಲಿಕಾಪ್ಟರ್ ಮೂಲಕ ಕೊನಾರ್ಕ್ಗೆ ತೆರಳಿದ್ದಾರೆ. ನಂತರ ಕೊನಾರ್ಕ್ನಲ್ಲಿ ಇಂಡಿಯಾ ಆಯಿಲ್ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿದ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಇದನ್ನೂ ಓದಿ:'ಬಾಂಬೆ ತಂಡ'ದ ಸದಸ್ಯರ ಕ್ಷೇತ್ರಗಳು ಅಭಿವೃದ್ಧಿಯಾದವೇ?; ಎಚ್ಡಿಕೆ ವಾಗ್ದಾಳಿ