ನವದೆಹಲಿ: ಇಂದು ನಾವು ಅಂತರ್ಜಾಲದ ಮೂಲಕ ವಿಶ್ವದ ವಿವಿಧ ಮೂಲೆಗಳಿಗೂ ಸಂಪರ್ಕ ಹೊಂದಿದ್ದೇವೆ. ಆದರೆ, ನಮ್ಮ ಮನಸ್ಸು ಯಾವಾಗಲೂ 'ಮಾತ್ರಭೂಮಿ' ಬಳಿಯೇ ಇರುವುದು. ಕಳೆದ ಕೆಲ ವರ್ಷಗಳಲ್ಲಿ ಅನಿವಾಸಿ ಭಾರತೀಯರು ಇತರ ದೇಶಗಳಲ್ಲಿ ತಮ್ಮ ಗುರುತನ್ನು ಬಲಪಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
16ನೇ 'ಪ್ರವಾಸಿ ಭಾರತೀಯ ದಿನ'ದ ನಿಮಿತ್ತ ಸಾಗರೋತ್ತರ ಭಾರತೀಯರೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿ ಪಿಎಂ ಮೋದಿ, ಕೋವಿಡ್ ಆರಂಭದ ದಿನಗಳಲ್ಲಿ ಭಾರತವು ಪಿಪಿಇ ಕಿಟ್ಗಳು, ಮಾಸ್ಕ್ಗಳು, ವೆಂಟಿಲೇಟರ್ಗಳು ಮತ್ತು ಟೆಸ್ಟಿಂಗ್ ಕಿಟ್ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಆದರೆ, ಇಂದು ನಮ್ಮ ರಾಷ್ಟ್ರವು ಸ್ವಾವಲಂಬಿಯಾಗಿದೆ. ಇಂದು ಭಾರತವು ಎರಡು 'ಮೇಡ್ ಇನ್ ಇಂಡಿಯಾ' ಕೊರೊನಾ ಲಸಿಕೆಗಳೊಂದಿಗೆ (ಕೊವಾಕ್ಸಿನ್ ಹಾಗೂ ಕೋವಿಶೀಲ್ಡ್) ಜೀವಗಳನ್ನು ಉಳಿಸಲು ಸಿದ್ಧವಾಗಿದೆ ಎಂದರು.
ಇದನ್ನೂ ಓದಿ: ಕೊರೊನಾ ಲಸಿಕೆ ಹಂಚಿಕೆಗೆ ಸಿದ್ಧತೆ: ಸೋಮವಾರ ಎಲ್ಲ ರಾಜ್ಯದ ಸಿಎಂಗಳೊಂದಿಗೆ ಪ್ರಧಾನಿ ಸಂವಾದ
ಭಾರತ ಭಯೋತ್ಪಾದನೆಯ ವಿರುದ್ಧ ನಿಂತಾಗ, ಪ್ರಪಂಚಕ್ಕೂ ಈ ಸವಾಲನ್ನು ಎದುರಿಸುವ ಧೈರ್ಯ ಮಾಡಿತು. ಇಂದು ಭಾರತವು ಭ್ರಷ್ಟಾಚಾರ ಕೊನೆಗೊಳಿಸಲು ತಂತ್ರಜ್ಞಾನವನ್ನು ಬಳಸುತ್ತಿದೆ. ಲಕ್ಷ ಮತ್ತು ಕೋಟಿ ಮೌಲ್ಯದ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ದೇಶದ ಬಡವರ ಸಬಲೀಕರಣಕ್ಕಾಗಿ ಭಾರತದಲ್ಲಿ ನಡೆಯುತ್ತಿರುವ ಅಭಿಯಾನವನ್ನು ವಿಶ್ವದಾದ್ಯಂತ ಚರ್ಚಿಸಲಾಗುತ್ತಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶವೂ ಮುನ್ನಡೆ ಸಾಧಿಸಬಹುದು ಎನ್ನುವುದನ್ನು ನಾವು ತೋರಿಸಿದ್ದೇವೆ ಎಂದು ಪ್ರಧಾನಿ ಹೇಳಿದರು.
ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಸಾಧನೆ, ಕೊಡುಗೆಗಳನ್ನು ಗೌರವಿಸಲು ಜನವರಿ 9ರಂದು ಪ್ರತಿವರ್ಷ ದಿನವಾಗಿ ಆಚರಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ 'ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ' ನೀಡಲಾಗುತ್ತದೆ.