ತಿರುವನಂತಪುರ/ ಕೇರಳ: ಸೋಮವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದಲ್ಲಿ ಸಂಪೂರ್ಣ ಲಾಕ್ಡೌನ್ ಘೋಷಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಅವರು ಮಂಡಿಸಿದ ಲಾಕ್ಡೌನ್ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಮತ್ತು ಸಿಪಿಎಂ ಮತ್ತು ಬಿಜೆಪಿ ನಾಯಕರು ಸಮ್ಮತಿಸಿದರಾದರೂ ಕೊನೆಯಲ್ಲಿ ಸಂಪೂರ್ಣ ಲಾಕ್ಡೌನ್ ಬೇಡ ಹಾಗೂ ಶನಿವಾರ ಮತ್ತು ಭಾನುವಾರ ಮಿನಿ ಲಾಕ್ಡೌನ್ಗಳನ್ನು ಮುಂದುವರಿಸಲು ಸಭೆ ನಿರ್ಧರಿಸಿತು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತೊಂದು ಲಾಕ್ ಡೌನ್ ರಾಜ್ಯದ ಆರ್ಥಿಕತೆ ಮತ್ತು ಜನರ ಜೀವನೋಪಾಯಕ್ಕೆ ಹಾನಿಕಾರಕ ಎಂದು ಹೇಳಿದರು. ಹೀಗಾಗಿ ಸೋಂಕು ಪ್ರಕರಣಗಳು ಹೆಚ್ಚಿರುವ ಹಾಗೂ ಕಂಟೈನ್ಮೆಂಟ್ ಜೋನ್ಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲು ಸಭೆ ತೀರ್ಮಾನಿಸಿತು.
ಇನ್ನು ಮೇ 2 ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಕೊರೊನಾ ಹಿನ್ನೆಲೆ ಅಂದು ಯಾವುದೇ ಸಂಭ್ರಮಾಚರಣೆ ಮಾಡದಿರಲು ರಾಜಕೀಯ ಪಕ್ಷಗಳು ಒಪ್ಪಿಗೆ ಸೂಚಿಸಿವೆ.