ಹೈದರಾಬಾದ್: ಪೋಷಕರಿಗೆ ತಮ್ಮ ಮಕ್ಕಳೇ ಸರ್ವಸ್ವ. ದೇಹಕ್ಕೆ ಕಣ್ಣುಗಳಂತಿರುವ ಮಕ್ಕಳಿಗೆ ಅತ್ಯುತ್ತಮ ಬದುಕು ರೂಪಿಸಿ ಕೊಡಲು ತಂದೆ-ತಾಯಿ ಪ್ರಾಣವನ್ನೇ ಮುಡಿಪಿಡುತ್ತಾರೆ. ಇದನ್ನರಿಯದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹೌದು, ಮನೆಯ ಆರ್ಥಿಕ ಸ್ಥಿತಿಗತಿಯಿಂದ ನೊಂದು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕ ಪೋಷಕರಿಗೆ ಹೊರೆಯಾಗಬಾರದು ಎಂದು ಯೋಚಿಸಿ ಆತ್ಮಹತ್ಯೆಯ ದಾರಿ ತುಳಿದಿದ್ದಾನೆ. ಈ ಮನಕಲಕುವ ಘಟನೆ ಇಲ್ಲಿನ ಕಿಶನ್ಬಾಗ್ ಎಂಬಲ್ಲಿ ನಡೆದಿದೆ.
![minor boy suicide, minor boy suicide due to heart problem, minor boy suicide due to heart problem in hyderabad, Hyderabad crime news, ಬಾಲಕ ಆತ್ಮಹತ್ಯೆಗೆ ಶರಣು, ಹೃದಯ ರೋಗ ಸಮಸ್ಯೆ ಹಿನ್ನೆಲೆ ಬಾಲಕ ಆತ್ಮಹತ್ಯೆ ಶರಣು, ಹೈದರಾಬಾದ್ನಲ್ಲಿ ಬಾಲಕ ಆತ್ಮಹತ್ಯೆಗೆ ಶರಣು, ಹೈದರಾಬಾದ್ ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/tg-hyd-08-27-minor-suicide-av-ts10003_27102021083058_2710f_1635303658_569_2710newsroom_1635320074_384.jpg)
ವಿವರ:
ಕಿಶನ್ಬಾಗ್ ನಿವಾಸಿ ಪವನ್ಗೆ 17 ವರ್ಷ. ಇತ್ತೀಚೆಗೆ ಅನಾರೋಗ್ಯ ಸಮಸ್ಯಯಿಂದ ಬಳಲುತ್ತಿದ್ದ ಪವನ್ ವೈದ್ಯರ ಬಳಿ ತೆರಳಿದ್ದ. ಈತನ ಸಮಸ್ಯೆ ಆಲಿಸಿದ ವೈದ್ಯರು, ತಪಾಸಣೆ ನಡೆಸಿ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.
ಈ ಸಂಗತಿ ಕೇಳಿ ವಿಚಲಿತನಾದ ಪವನ್ ಮನೆಯಲ್ಲಿ ತಿಳಿಸಲಿಲ್ಲ. ಬದಲಾಗಿ ಗಾಢವಾಗಿ ಚಿಂತಿಸತೊಡಗಿದ್ದ. ಪೋಷಕರ ಆರ್ಥಿಕ ಪರಿಸ್ಥಿತಿ ಆತನನ್ನು ಮತ್ತಷ್ಟು ಜರ್ಜರಿತಗೊಳಿಸಿದೆ. ಹಾಗಾಗಿ, ತನ್ನಿಂದ ತಂದೆ-ತಾಯಿಗೆ ಯಾವುದೇ ರೀತಿಯೂ ತೊಂದರೆಯಾಗದಿರಲಿ ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದ.
ಡೆತ್ನೋಟ್ನಲ್ಲಿ ಏನಿದೆ?:
![minor boy suicide, minor boy suicide due to heart problem, minor boy suicide due to heart problem in hyderabad, Hyderabad crime news, ಬಾಲಕ ಆತ್ಮಹತ್ಯೆಗೆ ಶರಣು, ಹೃದಯ ರೋಗ ಸಮಸ್ಯೆ ಹಿನ್ನೆಲೆ ಬಾಲಕ ಆತ್ಮಹತ್ಯೆ ಶರಣು, ಹೈದರಾಬಾದ್ನಲ್ಲಿ ಬಾಲಕ ಆತ್ಮಹತ್ಯೆಗೆ ಶರಣು, ಹೈದರಾಬಾದ್ ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/savu_2710newsroom_1635320074_90.jpg)
‘ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ. ನನಗೆ ಹೃದಯ ಸಂಬಂಧಿ ಸಮಸ್ಯೆಯಿದೆ. ವೈದ್ಯಕೀಯ ಖರ್ಚಿಗಾಗಿ ನಿಮಗೆ ಕಷ್ಟ ಕೊಡಲು ನನಗಿಷ್ಟವಿಲ್ಲ. ಈ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನೀವಂದ್ರೆ ನನಗೆ ತುಂಬಾ ಇಷ್ಟ. ನನ್ನ ಮೊಬೈಲ್ ಫೋನ್ ಮಾರಾಟ ಮಾಡಿ ಬಂದ ಹಣದಿಂದ ನನ್ನ ಅಂತ್ಯಕ್ರಿಯೆ ನೆರವೇರಿಸಿ. ಇಲ್ಲವಾದಲ್ಲಿ ನನ್ನ ಮೇಲೆ ಆಣೆ’ - ಪವನ್