ತಿರುವನಂತಪುರಂ(ಕೇರಳ) : 'ಮೆಟ್ರೋ ಮ್ಯಾನ್' ಎಂದು ಹೆಸರುವಾಸಿಯಾಗಿರುವ ಇ. ಶ್ರೀಧರನ್ ತಾವು ಸ್ಪರ್ಧೆ ಮಾಡಿದ್ದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದಾರೆ. ಇವರ ವಿರುದ್ಧ ಸ್ಪರ್ಧೆ ಮಾಡಿದ್ದ ಯುಡಿಎಫ್ ಅಭ್ಯರ್ಥಿ ಶಫಿ ಪರಂಬಿಲ್ ವಿಜಯದ ಮಾಲೆ ಧರಿಸಿದ್ದಾರೆ. ಕ್ಷೇತ್ರದಲ್ಲಿ 3,840 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಶ್ರೀಧರನ್ ಸೋಲು ಕಂಡಿದ್ದಾರೆ.
82 ವರ್ಷದ ಇ. ಶ್ರೀಧರನ್ ಫೆಬ್ರವರಿ ತಿಂಗಳಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದರು. 1995 ರಿಂದ 2012ರವರೆಗೆ ದೆಹಲಿ ಮೆಟ್ರೋದ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಇವರು ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಕೊಂಕಣ ರೈಲ್ವೆ ಕನಸನ್ನು ಸಾಕಾರಗೊಳಿಸಿದವರು ಕೂಡಾ ಇವರೇ. ಇವರಿಗೆ 2001ರಲ್ಲಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಹಾಗೂ 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಇದನ್ನೂ ಓದಿ: ಮೆಟ್ರೋ ಮ್ಯಾನ್ ಇ.ಶ್ರೀಧರನ್ ಕೇರಳ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ
ಬಿಜೆಪಿ ಸೇರಿಕೊಳ್ಳುತ್ತಿದ್ದಂತೆ ಅವರನ್ನ ಕೇರಳದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿತ್ತು. ಜತೆಗೆ ಪಾಲಕ್ಕಾಡ್ ಕ್ಷೇತ್ರದಿಂದ ಟಿಕೆಟ್ ಸಹ ನೀಡಲಾಗಿತ್ತು. ಆದರೆ ಇದೀಗ ಅವರು ಎದುರಾಳಿ ಮುಂದೆ ಸೋಲು ಕಂಡಿದ್ದಾರೆ.
ಕೇರಳ ಬಿಜೆಪಿ ಅಧ್ಯಕ್ಷರಿಗೂ ಸೋಲು: ಕೇರಳದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಸೋಲು ಕಂಡಿದ್ದಾರೆ. ಕೇರಳದ ಕೊನ್ನಿ ಹಾಗೂ ಮಂಜೇಶ್ವರ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಸ್ಪರ್ಧೆ ಮಾಡಿದ್ದರು. ಈ ಎರಡು ಕ್ಷೇತ್ರಗಳಲ್ಲೂ ಅವರಿಗೆ ಮುಖಭಂಗವಾಗಿದೆ.