ಸಿಲಿಗುರಿ(ಪಶ್ಚಿಮ ಬಂಗಾಳ): ಕಳೆದ 10 ವರ್ಷಗಳಿಂದ ನಾಪತ್ತೆಯಾಗಿದ್ದ ಮಾನಸಿಕ ವಿಶೇಷಚೇತನ ಯುವತಿಯನ್ನು ಕುಟುಂಬ ಸದಸ್ಯರೊಂದಿಗೆ ಸೇರಿಸುವಲ್ಲಿ ಇಲ್ಲಿನ ವೈದ್ಯಕೀಯ ಕಾಲೇಜ್ವೊಂದು ಯಶಸ್ವಿಯಾಗಿದೆ. ಯುವತಿ 10 ವರ್ಷಗಳ ಹಿಂದೆ ಡೋರ್ಸ್ ಟೀ ತೋಟದಿಂದ ನಾಪತ್ತೆಯಾಗಿದ್ದಳು. ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪಚಾರದಿಂದ ಮೀನಾ ಮಿರ್ದಾ ತನ್ನ ಪ್ರೀತಿಪಾತ್ರರ ಬಳಿಗೆ ಮರಳಲು ಸಾಧ್ಯವಾಗಿದೆ.
ಅಕ್ಕ ಮನು ಮಿರ್ದಾ ತನ್ನ ಸಹೋದರಿಯನ್ನು ಮರಳಿ ಪಡೆದ ಸಂತೋಷದಲ್ಲಿದ್ದಾರೆ. ಇದಕ್ಕಾಗಿ ಅವರು ಆಸ್ಪತ್ರೆ ಆಡಳಿತಕ್ಕೆ ಧನ್ಯವಾದ ಹೇಳಿದ್ದಾರೆ. ಮೇಟೇಲಿ ಬ್ಲಾಕ್ನ ಕಿಲ್ಕೋಟ್ ಚಹಾ ತೋಟದ ನಿವಾಸಿ ಮೀನಾ ಮಿರ್ದಾ (27) ಹುಟ್ಟಿನಿಂದಲೇ ಮಾನಸಿಕವಾಗಿ ಅಸ್ವಸ್ಥರಾಗಿದ್ದರು ಎಂದು ತಿಳಿದು ಬಂದಿದೆ. ಕೆಲವೊಮ್ಮೆ ಅವಳು ಒಂದು ಅಥವಾ ಎರಡು ದಿನಗಳವರೆಗೆ ಕಣ್ಮರೆಯಾಗುತ್ತಿದ್ದಳು ಮತ್ತು ನಂತರ ತಾನೇ ಹಿಂತಿರುಗುತ್ತಿದ್ದಳು. ಮೀನಾ ಸುಮಾರು 10 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಸಂಬಂಧಿಕರು ವಿವಿಧೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ನಂತರ ಕುಟುಂಬದವರು ಹಣಕಾಸಿನ ತೊಂದರೆಯಿಂದ ತಮ್ಮ ಹುಡುಕಾಟವನ್ನು ಕೈಬಿಟ್ಟರು.
ಕುಟುಂಬಸ್ಥರು ಆಕೆಯನ್ನು ಮತ್ತೆ ಮರಳಿ ಪಡೆಯುತ್ತೇವೆ ಎಂಬ ಆಸೆಯನ್ನೇ ಕೈಬಿಟ್ಟಿದ್ದರು. ಆದರೆ ಆಸ್ಪತ್ರೆಗೆ ದಾಖಲಾಗಿದ್ದ ಯುವತಿಯನ್ನು ಮನೆಗೆ ಕರೆತರುವಲ್ಲಿ ವೈದ್ಯಕೀಯ ಕಾಲೇಜು ಅಧಿಕಾರಿಗಳು ಮುಂದಾದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೀನಾ ಫೋಟೋಗಳನ್ನು ಆಸ್ಪತ್ರೆ ಆಡಳಿತ ಮಂಡಳಿ ಸಾಮಾಜಿಕ ಕಾರ್ಯಕರ್ತರು ಹಾಗೂ ಪೊಲೀಸ್ ಆಡಳಿತಕ್ಕೆ ಕಳುಹಿಸಿತ್ತು. ಈ ಮೂಲಕ ಒಂದು ದಶಕದ ನಂತರ ಆರೋಗ್ಯಾಧಿಕಾರಿಗಳ ನೆರವಿನಿಂದ ಮೀನಾ ಮಿರ್ದಾ ತನ್ನ ಮನೆಗೆ ಮರಳಲು ಸಾಧ್ಯವಾಯಿತು.
ಮಾನಸಿಕ ವಿಕಲಚೇತನ ಯುವತಿಯನ್ನು ಚಿಕಿತ್ಸೆಗಾಗಿ ನವೆಂಬರ್ 30 ರಂದು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ತಲೆಯ ಮೇಲೆ ಗಾಯದ ಗುರುತುಗಳಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಮೀನಾ ತನ್ನ ಹೆಸರು ಮತ್ತು ವಿಳಾಸವನ್ನು ಹೇಳುವುದಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ಮೆಡಿಕಲ್ ಕಾಲೇಜು ಅಧಿಕಾರಿಗಳು ಸಿಲಿಗುರಿ ಕಾನೂನು ನೆರವು ವೇದಿಕೆಯ ಸಹಾಯವನ್ನು ಕೋರಿದರು.
ವೇದಿಕೆಯ ಅಧ್ಯಕ್ಷ ಅಮಿತ್ ಸರ್ಕಾರ್ ಮತ್ತು ಸಾಮಾಜಿಕ ಕಾರ್ಯಕರ್ತೆ ಶುಕ್ಲಾ ದೇಬನಾಥ್ ಅವರು ಕೇವಲ 24 ಗಂಟೆಗಳಲ್ಲಿ ಯುವತಿಯ ಕುಟುಂಬವನ್ನು ಪತ್ತೆಹಚ್ಚಿದರು. ಮೀನಾ ಕುಟುಂಬಸ್ಥರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಆಕೆಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಕಾಲೇಜಿನ ಡೀನ್ ಸಂದೀಪ್ ಸೇನ್ಗುಪ್ತಾ, ಸಹಾಯಕ ಸೂಪರ್ ಗೌತಮ್ ದಾಸ್, ಅನಿಮೇಶ್ ಬರ್ಮನ್, ದೇವ್ ಕುಮಾರ್ ಪ್ರಧಾನ್, ಬಂಗಾ ರತ್ನ ಭಾರತಿ ಘೋಷ್ ಮತ್ತು ಕಾನೂನು ನೆರವು ವೇದಿಕೆಯ ಅಧ್ಯಕ್ಷ ಅಮಿತ್ ಸರ್ಕಾರ್ ಉಪಸ್ಥಿತರಿದ್ದರು.
ಈ ವೇಳೆ ಸಂದೀಪ್ ಸೇನ್ಗುಪ್ತಾ 'ಈಟಿವಿ ಭಾರತ' ಜೊತೆ ಮಾತನಾಡಿ, ಇಂತಹವರು ಮತ್ತೆ ಮನೆಗೆ ಸೇರುವುದು ನಮಗೆ ನಿಜವಾಗಿಯೂ ಸಂತೋಷವಾಗಿದೆ ಎಂದು ಹೇಳಿದರು. ಮೀನಾಳನ್ನು ಮರಳಿ ಪಡೆದಿರುವ ಕುಟುಂಬಸ್ಥರು ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಓದಿ: ಮದುವೆಗೂ ಮುನ್ನವೇ ಮಗುವಿಗೆ ಜನ್ಮ: ನವಜಾತ ಶಿಶು ಎಸೆದು, ಯುವತಿಗೆ ವಿಷವುಣಿಸಿದ ಪೋಷಕರು!