ಮುಂಬೈ(ಮಹಾರಾಷ್ಟ್ರ): ದೇಶದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕೊಲೆಗಳು ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮಹಾರಾಷ್ಟ್ರ ಮುಂಬೈನ ಬಾಂದ್ರಾದ ಉಪನಗರದಲ್ಲಿ 500 ರೂಪಾಯಿ ಪಾವತಿ ವಿಚಾರದಲ್ಲಿ 25 ವರ್ಷದ ಯುವಕನನ್ನು ಇಬ್ಬರು ಸಹೋದರರು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ. ಹಾನಿಗೊಳಗಾದ ಮೊಬೈಲ್ ರಿಪೇರಿ ಮಾಡಲು 500 ರೂಪಾಯಿ ಕೇಳಿದ್ದೇ ಸಾವಿಗೆ ಕಾರಣವಾಗಿದೆ.
ಪ್ರಕರಣದ ಹಿನ್ನೆಲೆ: ನಜೀಮ್ ಇಫ್ತಿಕರ್ ಖಾನ್ ಮತ್ತು ಇಬ್ಬರು ಆರೋಪಿ ಸಹೋದರರು ಬಾಂದ್ರಾದ ಗರೀಬ್ ನಗರದಲ್ಲಿ ವಾಸಿಸುತ್ತಿದ್ದರು. ಆರೋಪಿಗಳಲ್ಲಿ ಒಬ್ಬ ನಜೀಮ್ ಖಾನ್ ಮೊಬೈಲ್ ಅನ್ನು ಹಾನಿಗೊಳಿಸಿದ್ದ. ಅದನ್ನು ಸರಿಪಡಿಸಲು ಅವನಲ್ಲಿಯೇ ಖಾನ್ 1,000 ರೂಪಾಯಿ ನೀಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಒಪ್ಪಿದ ಅವರಿಬ್ಬರು ನಜೀಮ್ ಖಾನ್ ಪತ್ನಿಗೆ 500 ರೂಪಾಯಿಯನ್ನು ಮೊದಲು ಪಾವತಿಸಿದ್ದಾರೆ. ಇನ್ನುಳಿದ 500 ರೂಪಾಯಿಯನ್ನು ಶುಕ್ರವಾರ ಮಧ್ಯಾಹ್ನ 12 ಗಂಟೆಯ ಒಳಗೆ ನೀಡುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಒಪ್ಪದ ಖಾನ್ ಈ ಕೂಡಲೇ ಪೂರ್ತಿ ಹಣವನ್ನು ಪಾವತಿಸುವಂತೆ ಒತ್ತಾಯಿಸಿದ್ದಾರೆ.
ಬಳಿಕ ಮೂವರ ನಡುವೆಯು ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಆರೋಪಿಗಳಿಬ್ಬರು ಚಾಕುವನ್ನು ಹೊತರೆಗೆದು ಖಾನ್ ಎದೆಗೆ ಇರಿದಿದ್ದಾರೆ. ಘಟನೆಯು ಗುರುವಾರ ರಾತ್ರಿ ಬಾಂದ್ರಾ ರೈಲ್ವೇ ನಿಲ್ದಾಣದ ಫುಟ್ ಓವರ್ ಸೇತುವೆಯ ಬಳಿ ನಡೆದಿದೆ. ಬಳಿಕ ಗಾಯಗೊಂಡ ನಜೀಮ್ ಇಫ್ತಿಕರ್ ಖಾನ್ ಅನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅದಾಗಲೇ ಖಾನ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ನಜೀಮ್ ಅಫ್ತಿಕರ್ ಖಾನ್ ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಮಹಿಳೆ ಕೊಲೆ ಯತ್ನ ಪ್ರಕರಣ- ಆರೋಪಿಗಳಿಗೆ 2 ವರ್ಷ ಕಾರಾಗೃಹ, 22 ಸಾವಿರ ರೂ. ದಂಡ
ನಡು ರಸ್ತೆಯಲ್ಲೇ ಹೆಂಡತಿಯನ್ನು ಕೊಂದಿದ್ದ ಪತಿ: ಇತ್ತೀಚೆಗಷ್ಟೇ ತೆಲಂಗಾಣದ ಹೈದರಾಬಾದ್ನಲ್ಲಿ ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿತ್ತು. ಕಿರುಕುಳ ತಾಳಲಾರದೇ ಮಕ್ಕಳೊಂದಿಗೆ ದೂರವಾಗಿದ್ದ ಹೆಂಡತಿಯನ್ನು ಪತಿ ನಡು ರಸ್ತೆಯಲ್ಲೇ ಕಟ್ಟಿಗೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ನ ಲಾಂಗರ್ಹೌಸ್ನಲ್ಲಿ ಫೆಬ್ರವರಿ 3 ರಂದು ನಡೆದಿತ್ತು.
ಏಳು ವರ್ಷಗಳ ಹಿಂದೆ ಯೂಸುಫ್ ಜೊತೆ ಕರೀನಾ ಬೇಗಂ ವಿವಾಹವಾಗಿತ್ತು. ಮದುವೆ ನಂತರ ಅನ್ಯೋನ್ಯವಾಗಿದ್ದ ದಂಪತಿಗೆ ಮೂವರು ಮಕ್ಕಳಿದ್ದಾರೆ. ಕೆಲ ಸಮಯದಿಂದ ಪತಿ ಯೂಸುಫ್ ಪತ್ನಿಯೊಂದಿಗೆ ವಿನಾಕಾರಣ ಜಗಳವಾಡುತ್ತಿದ್ದರಂತೆ. ಪ್ರತಿ ದಿನವೂ ಕಿರುಕುಳ ನೀಡುತ್ತಿದ್ದ ಕಾರಣ ಬೇಸತ್ತ ಪತ್ನಿ ತನ್ನ ಮಕ್ಕಳೊಂದಿಗೆ ತಾಯಿ ಮನೆ ಸೇರಿದ್ದರು. ಇದರಿಂದ ಕೋಪಗೊಂಡ ಪತಿ ತನ್ನ ಹೆಂಡತಿ ಕರೀನಾರನ್ನು ಹಿಂಬಾಲಿಸಿ ಚಲನವಲನಗಳನ್ನು ಗಮನಿಸುತ್ತಿದ್ದ. ಫೆಬ್ರವರಿ 3 ಶುಕ್ರವಾರದಂದು ಯೂಸುಫ್, ಕರೀನಾರನ್ನು ಅಡ್ಡಗಟ್ಟಿ ಹೋಗದಂತೆ ತಡೆದಿದ್ದರು. ಆದರೆ ಇದಕ್ಕೆ ಕ್ಯಾರೆ ಎನ್ನದ ಪತ್ನಿ ಮುಂದೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಅವರ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರು.
ಇದನ್ನೂ ಓದಿ: 50 ಲೀ.ಟ್ಯಾಂಕ್ ಸಾಮರ್ಥ್ಯದ ಕಾರಿಗೆ 57 ಲೀ. ಪೆಟ್ರೋಲ್ ಬಿಲ್ ನೀಡಿ ವಂಚನೆ ಆರೋಪ: ಪೆಟ್ರೋಲ್ ಬಂಕ್ ಸೀಲ್