ಮಾಲ್ಡಾ(ಪಶ್ಚಿಮಬಂಗಾಳ) : ಕೇಂದ್ರ ಜಾರಿಗೆ ತಂದಿರುವ ಪಿಎಂ ಕಿಸಾನ್ ಯೋಜನೆಯ ಲಾಭವನ್ನು ರಾಜ್ಯದ ಜನತೆಗೆ ತಲುಪದಂತೆ ಸಿಎಂ ಮಮತಾ ಬ್ಯಾನರ್ಜಿ ತಡೆದಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಆರೋಪಿಸಿದ್ದಾರೆ.
ಕೃಷಕ್ ಸುರಕ್ಷಾ ಅಭಿಯಾನದಲ್ಲಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಹಾಗೂ ಅವರ ಪಕ್ಷಕ್ಕೆ ಟಾಟಾ ಮಾಡಲು ಜನರು ಮನಸ್ಸು ಮಾಡಿದ್ದಾರೆ ಎಂದು ಹೇಳಿದರು. ತಮ್ಮ ಸ್ವಾರ್ಥಕ್ಕಾಗಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಜಾರಿಗೊಳಿಸಿರಲಿಲ್ಲ.
ಇದರಿಂದಾಗಿ ಬಂಗಾಳದ ರೈತರಿಗೆ ದೊಡ್ಡ ಅನ್ಯಾಯವಾಗಿದೆ. ಇದೀಗ ಈ ಯೋಜನೆಗೆ ರೈತರೇ ಸಮ್ಮತಿ ನೀಡಿರುವುದರಿಂದ ಅದನ್ನು ಕಾರ್ಯಗತಗೊಳಿಸಿದ್ದಾರೆ ಎಂದರು. ನಾನು ಇಲ್ಲಿಗೆ ಬರುವಾಗ ಜೈ ಶ್ರೀರಾಮ್ ಘೋಷಣೆಗಳೊಂದಿಗೆ ನನ್ನನ್ನು ಸ್ವಾಗತಿಸಲಾಯಿತು. ಆದರೆ, ದೀದಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಕೋಪಗೊಳ್ಳುತ್ತಾರೆಂದರೆ ಏನರ್ಥ ಎಂದು ಪ್ರಶ್ನಿಸಿದರು.
ಕೆಲ ದಿನಗಳ ಹಿಂದೆ ಸರ್ಕಾರಿ ಕಾರ್ಯಕ್ರಮದ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಮಮತಾ ಬ್ಯಾನರ್ಜಿ ಕುಪಿತರಾಗಿ, ಭಾಷಣವನ್ನು ಮೊಟಕುಗೊಳಿಸಿದರು.