ಕೋಲ್ಕತ್ತಾ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವುದೇ ವಿರೋಧ ಪಕ್ಷಗಳ ಗುರಿಯಾಗಬೇಕು. ವಿರೋಧ ಪಕ್ಷಗಳ "ನಾಯಕ" ಯಾರಾಗಬೇಕು ಎಂಬ ಬಗ್ಗೆ ಈಗಲೇ ಚರ್ಚೆ ಬೇಡ ಎಂದು ತೃಣಮೂಲ ಕಾಂಗ್ರೆಸ್ ಅಧಿನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಪುನರುಚ್ಚರಿಸಿದ್ದಾರೆ.
ಕೇಂದ್ರ ಸರ್ಕಾರ ಯೋಜನೆಗಳ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಧರಣಿ ನಡೆಸುತ್ತಿರುವ ಮಮತಾ, ವಿರೋಧ ಪಕ್ಷಗಳು ಈಗಲೇ ನಾಯಕರ ನೇಮಕ ಮಾಡುವುದು ಬೇಕಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಅದೇ ಈಗಿನ ಪ್ರಮುಖ ಉದ್ದೇಶ. ಅದು ಬಿಟ್ಟು ವಿಪಕ್ಷಳ ನಾಯಕನ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಅಭಿಪ್ರಾಯಪಟ್ಟರು.
"ಒಂದು ಆಟವಿದೆ. ಅದರಲ್ಲಿ ನಾವು ಸಹ ಭಾಗವಹಿಸುತ್ತೇವೆ. ಉತ್ತರ ಪ್ರದೇಶದಲ್ಲಿ ನಾವು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗೆ ಜಂಟಿಯಾಗಿ ಅಖಾಡಕ್ಕೆ ಇಳಿಯುತ್ತೇವೆ. 2024 ರಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ಎಲ್ಲಾ ಧರ್ಮದ ಜನರು ಈ ಆಟದಲ್ಲಿ ಭಾಗವಹಿಸುತ್ತಾರೆ. ಇದೊಂದೇ ಈಗಿನ ನಮ್ಮ ಉದ್ದೇಶ" ಎಂದು ಹೇಳಿದರು.
ಕಾಂಗ್ರೆಸ್ ಪಾತ್ರವೇನು?: ಇದೇ ವೇಳೆ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೇನು ಎಂಬ ಬಗ್ಗೆ ಸುಳಿವು ನೀಡಲಿಲ್ಲ. ತಾವು ರಚಿಸುತ್ತಿರುವ ತೃತೀಯ ರಂಗದಲ್ಲಿ ಕಾಂಗ್ರೆಸ್ ಇದೆಯಾ ಇಲ್ಲವೇ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ. ಹಳೆಯ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕೆ ಬೇಡವೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ಅಖಿಲೇಶ್- ಮಮತಾ ಭೇಟಿ: ಕಾಂಗ್ರೆಸ್ ಜೊತೆಗಿನ ಭಿನ್ನಾಭಿಪ್ರಾಯದ ನಡುವೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಮತಾ ಬ್ಯಾನರ್ಜಿ ಅವರನ್ನು ಈಚೆಗೆ ಭೇಟಿ ಮಾಡಿದ್ದರು. ಇದು ಕಾಂಗ್ರೆಸ್ಸೇತರ ಹೊಸ ರಂಗ ರಚಿಸುವ ಬಗ್ಗೆ ಚರ್ಚೆ ನಡೆಸಿದರು ಎಂಬುದು ವರದಿಯಾಗಿದೆ. ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಭಾವಗಹಿಸಲು ಪಶ್ಚಿಮ ಬಂಗಾಳಕ್ಕೆ ಬಂದ ವೇಳೆ ಅಖಿಲೇಶ್ ಯಾದವ್, ದೀದಿ ಜೊತೆಗೆ ಚರ್ಚೆ ನಡೆಸಿದ್ದರು.
ತೃಣಮೂಲ ಕಾಂಗ್ರೆಸ್ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಸಮಾನ ಅಂತರ ಕಾಯ್ದುಕೊಳ್ಳುತ್ತಿದೆ. ಈಚೆಗೆ ರಾಹುಲ್ ಗಾಂಧಿ ಅನರ್ಹತೆಯನ್ನು ಟೀಕಿಸಿದ್ದ ಮಮತಾ ಅವರು ಇದಕ್ಕೂ ಮೊದಲು ರಾಹುಲ್ರನ್ನೇ ಉದಾಹರಣೆ ನೀಡಿ ಟೀಕೆ ಮಾಡಿದ್ದರು. ಇದು ಕಾಂಗ್ರೆಸ್ನಿಂದಲೂ ಟೀಕೆಗೆ ಗುರಿಯಾಗಿತ್ತು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಭೇಟಿ ಬಳಿಕ ಮಮತಾ ಅವರು ಕಾಂಗ್ರೆಸ್ ಹೊರತುಪಡಿಸಿ ಆಯಾ ರಾಜ್ಯಗಳಲ್ಲಿ ಪ್ರಬಲವಾಗಿರುವ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ವಿರುದ್ಧ ತಮ್ಮ ಹೋರಾಟವನ್ನು ಬಲಪಡಿಸಿಲು ಕಾಂಗ್ರೆಸ್ಸೇತರ ಹೊಸ ರಂಗ ರಚನೆಯ ಅಗತ್ಯವನ್ನು ದೀದಿ ಪ್ರತಿಪಾದಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಬಿಜು ಜನತಾ ದಳದ ಮುಖ್ಯಸ್ಥರಾದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಮಮತಾ ಬ್ಯಾನರ್ಜಿ ಅವರು ಮುಂದಿನ ವಾರ ಭೇಟಿ ಮಾಡಲಿದ್ದು, ಪಟ್ನಾಯಕ್ ಕೂಡ ಹೊಸ ರಂಗದಲ್ಲಿ ಸೇರಿಕೊಳ್ಳುವ ಸಾಧ್ಯತೆ ಇದೆ. ಈಚೆಗೆ ಟಿಎಂಸಿ ಸಂಸದರೊಬ್ಬರು ಕಾಂಗ್ರೆಸ್ ವಿರುದ್ಧ ಹರಿಹಾಯ್ದು, ಪಕ್ಷ ಆಯಾ ಸಮಯಕ್ಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅದರ ಬದಲಾಗಿ ವಿಪಕ್ಷಗಳ "ಬಾಸ್" ಆಗಿ ಗುರುತಿಸಿಕೊಳ್ಳುತ್ತಿದೆ ಎಂದಿದ್ದರು.
ಇದನ್ನೂ ಓದಿ: ಕಾಶ್ಮೀರಿ ಪಂಡಿತ್ ಹತ್ಯೆ ಪ್ರಕರಣ: ಪುಲ್ವಾಮಾ ಗ್ರಾಮದಲ್ಲಿ ಎಸ್ಐಎ ದಾಳಿ