ಕೊಚ್ಚಿ (ಕೇರಳ): ಹೆಚ್. ಡಿ. ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದ ನಿಲುವನ್ನು ಜನತಾ ದಳ (ಎಸ್) ಕೇರಳ ಘಟಕವು ಶುಕ್ರವಾರ ತಿರಸ್ಕಾರ ಮಾಡಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ರಾಷ್ಟ್ರೀಯ ನಾಯಕತ್ವದ ನಿರ್ಧಾರದಿಂದ ಉಂಟಾದ ರಾಜಕೀಯ ಬಿಕ್ಕಟ್ಟನ್ನು ನಿವಾರಿಸಲು ನಾಯಕರು ಸೂಕ್ತ ನಿರ್ಧಾರಕ್ಕೆ ಬರಲು ವಿಫಲರಾಗಿದ್ದಾರೆ. ನಾಯಕತ್ವ ಸಭೆಯ ನಂತರ ಕೇರಳ ಜೆಡಿಎಸ್ ರಾಜ್ಯಾಧ್ಯಕ್ಷ ಮ್ಯಾಥ್ಯೂ ಟಿ. ಥಾಮಸ್ ಅವರು, ''ಮೂಲ ಜೆಡಿಎಸ್, ಹೊಸ ಪಕ್ಷ ಘೋಷಣೆ ಮಾಡುವುದಿಲ್ಲ'' ಎಂದು ಹೇಳಿದ್ದಾರೆ.
ಎರ್ನಾಕುಲಂನ ವೈಎಂಸಿಎ ಸಭಾಂಗಣದಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಮ್ಯಾಥ್ಯೂ ಟಿ. ಥಾಮಸ್, ''ಯಾವುದೇ ಸಮಾಲೋಚನೆ ನಡೆಸದೆ ದೇವೇಗೌಡರು ಈ ನಿರ್ಧಾರ ಕೈಗೊಂಡಿದ್ದಾರೆ. ದೇವೇಗೌಡರ ನಿಲುವನ್ನು ವಿರೋಧಿಸುವ ಇತರ ರಾಜ್ಯ ನಾಯಕರನ್ನು ಒಗ್ಗೂಡಿಸಲು ಕೇರಳ ಘಟಕ ಪ್ರಯತ್ನಿಸಲಿದೆ. ಈ ಕ್ರಮದ ಭಾಗವಾಗಿ ಇತರ ರಾಜ್ಯಗಳ ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
ಹೊಸ ಪಕ್ಷ ಪ್ರಾರಂಭಿಸುವ ಯೋಜನೆಯಿಲ್ಲ: ಬಿಜೆಪಿ ಮೈತ್ರಿ ವಿಚಾರದಲ್ಲಿ ಜೆಡಿ(ಎಸ್)ನ ಕೇರಳ ಘಟಕ ರಾಷ್ಟ್ರೀಯ ನಾಯಕತ್ವವನ್ನು ಖಂಡಿಸಿದ್ದರೂ ಕೂಡ, ಅದು ಇನ್ನೂ ಜನತಾ ದಳ (ಎಸ್) ಭಾಗವಾಗಿಯೇ ಉಳಿದಿದೆ. ಥಾಮಸ್ ಸದ್ಯಕ್ಕೆ ಹೊಸ ಪಕ್ಷ ಕಟ್ಟುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ''ರಾಷ್ಟ್ರೀಯ ಸಮಿತಿಯು ಅಂಗೀಕರಿಸಿರುವುದರಿಂದ ಕೇರಳ ಘಟಕವು ಹೊಸ ಪಕ್ಷವನ್ನು ಘೋಷಿಸುವುದಿಲ್ಲ'' ಎಂದು ಘೋಷಿಸಿದ್ದಾರೆ.
"ಜೆಡಿಎಸ್ ಕೇರಳದಲ್ಲಿ ರಾಜ್ಯ ಪಕ್ಷವಾಗಿದೆ. ದೇವೇಗೌಡರ ರಾಜಕೀಯ ನಿರ್ಧಾರವನ್ನು ವಿರೋಧಿಸುತ್ತಿರುವ ಸಮಾನ ಮನಸ್ಕ ನಾಯಕರು ಮತ್ತು ಜೆಡಿಎಸ್ನ ಇತರ ರಾಜ್ಯ ಘಟಕಗಳೊಂದಿಗೆ ಕೇರಳದ ರಾಷ್ಟ್ರೀಯ ನಾಯಕರು ಚರ್ಚೆ ಮುಂದುವರೆಸುತ್ತಾರೆ. ಕಳೆದ ರಾಜ್ಯ ನಾಯಕತ್ವ ಸಭೆಯು ಬಿಜೆಪಿ ಪರವಾದ ನಿಲುವನ್ನು ಸಾರ್ವಜನಿಕವಾಗಿ ತಿರಸ್ಕರಿಸಿತ್ತು. ನಮ್ಮ ಹಿಂದಿನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಯಾವಾಗಲೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಹೋರಾಡುತ್ತೇವೆ. ಒಂದು ವೇಳೆ ಪಕ್ಷದ ಶಾಸಕರ ಅನರ್ಹತೆ ವಿಚಾರ ಬಂದರೆ, ಆ ಹಂತದಲ್ಲಿ ಗಮನಿಸಬಹುದು'' ಎಂದು ಥಾಮಸ್ ಪ್ರತಿಕ್ರಿಯಿಸಿದ್ದಾರೆ.
ರಾಜಕೀಯ ಬಿಕ್ಕಟ್ಟಿನ ಬಗ್ಗೆ ಚರ್ಚಿಸಲು ಕೇರಳ ಜೆಡಿಎಸ್ ಪಕ್ಷದ ನಾಯಕರು ಕೊಚ್ಚಿಯಲ್ಲಿ ಎರಡನೇ ಬಾರಿಗೆ ಸಭೆ ನಡೆಸಿದರು. ರಾಷ್ಟ್ರೀಯ ಸಮಿತಿಗಳಲ್ಲಿ ಚರ್ಚಿಸದೆ ಹೆಚ್ ಡಿ ದೇವೇಗೌಡ ಮತ್ತು ಅವರ ಪುತ್ರ ಹೆಚ್ ಡಿ ಕುಮಾರಸ್ವಾಮಿ ಕೈಗೊಂಡಿರುವ ನಿರ್ಧಾರ ಸಂಘಟನಾ ವಿರೋಧಿ ಎಂದು ಕೇರಳ ನಾಯಕತ್ವ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಾಜಿ ಸಚಿವರಾದ ನೀಲಾ ಲೋಹಿತದಾಸನ್ ನಟರ್, ಸಿ.ಕೆ. ನಾಣು ಮುಂತಾದ ನಾಯಕರು ಈ ವಿಚಾರದಲ್ಲಿ ಶೀಘ್ರ ನಿರ್ಧಾರ ಕೈಗೊಳ್ಳಬೇಕೆಂದು ರಾಜ್ಯ ಘಟಕ ಒತ್ತಾಯಿಸಿದೆ. ಆದರೆ, ರಾಜ್ಯಾಧ್ಯಕ್ಷ ಮ್ಯಾಥ್ಯೂ ಟಿ ಥಾಮಸ್ ಮತ್ತು ಸಚಿವ ಕೃಷ್ಣನ್ ಕುಟ್ಟಿ ತಮ್ಮ ಶಾಸಕ ಸ್ಥಾನವನ್ನು ರಕ್ಷಿಸಲು ಪರಿಹಾರವನ್ನು ಹುಡುಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷಾಂತರ ನಿಷೇಧ ಕಾಯ್ದೆಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದು ಜೆಡಿಎಸ್ ರಾಜ್ಯ ಘಟಕಕ್ಕೆ ಮುಖ್ಯವಾಗಿದೆ.
ಮೂಲಗಳ ಪ್ರಕಾರ, ರಾಜ್ಯದಲ್ಲಿ ಇತ್ತೀಚೆಗೆ ಎಲ್ಜೆಡಿ ವಿಲೀನಗೊಂಡ ರಾಷ್ಟ್ರೀಯ ಜನತಾ ದಳದೊಂದಿಗೆ (ಆರ್ಜೆಡಿ) ವಿಲೀನಗೊಳ್ಳುವ ಆಲೋಚನೆಯನ್ನು ಜೆಡಿಎಸ್ ಗಂಭೀರವಾಗಿ ಪರಿಗಣಿಸುತ್ತಿದೆ. ಆರ್ಜೆಡಿಯನ್ನು ಒಪ್ಪದವರು ಸಮಾಜವಾದಿ ಪಕ್ಷದೊಂದಿಗೆ (ಎಸ್ಪಿ) ವಿಲೀನದ ಪ್ರಸ್ತಾಪವನ್ನೂ ಮಾಡಿದ್ದಾರೆ.
ಇದನ್ನೂ ಓದಿ: ಪತ್ರಕರ್ತೆಯೊಂದಿಗೆ ಅನುಚಿತ ವರ್ತನೆ ಆರೋಪ: ಕ್ಷಮೆಯಾಚಿಸಿದ ಬಿಜೆಪಿ ಮುಖಂಡ ಸುರೇಶ್ ಗೋಪಿ