ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಕೊನೆಯ ಹಂತಕ್ಕೆ ತಲುಪಿದ್ದು, ಶನಿವಾರ ಫಲಿತಾಂಶ ಹೊರಬೀಳಲಿದೆ. ಇದೆ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಉನ್ನತ ನಾಯಕರು ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀತ್ಗಢ ಮತ್ತು ತೆಲಂಗಾಣ ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದಾರೆ.
ಪಕ್ಷದ ಕಾರ್ಯಕರ್ತರ ತರಬೇತಿ ಸಮಾವೇಶನದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಇಂದು ರಾಜಸ್ಥಾನದ ಉದಯಪುರಕ್ಕೆ ತೆರಳಿದ್ದಾರೆ. ಮತ್ತು ಮುಂಬರುವ ಚುನಾವಣೆಯ ಬಗ್ಗೆ ಚರ್ಚಿಸಲು ರಾಜ್ಯದ ಹಿರಿಯ ನಾಯಕರನ್ನು ಅವರು ಭೇಟಿ ಮಾಡಲಿದ್ದಾರೆ. ತೆಲಂಗಾಣದಲ್ಲಿ ಪ್ರಿಯಾಂಕಾ ಗಾಂಧಿ ಯುವ ಪ್ರಣಾಳಿಕೆಯನ್ನು ಘೋಷಿಸಿದ ಒಂದು ದಿನದ ನಂತರ ಮಧ್ಯಪ್ರದೇಶದ ಎಂಪಿಸಿಸಿ ಅಧ್ಯಕ್ಷ ಕಮಲ್ ನಾಥ್ ಮಂಗಳವಾರ ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು ಮಹಿಳಾ ಕಲ್ಯಾಣ ಯೋಜನೆಗಳನ್ನು ಘೋಷಿಸಿದ್ದಾರೆ.
ನಾಲ್ಕು ರಾಜ್ಯಗಳ ಪೈಕಿ ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಪಕ್ಷವು ನೇರವಾಗಿ ಬಿಜೆಪಿ ವಿರುದ್ಧ ಹೋರಾಡುತ್ತಿದ್ದರೆ, ಇತ್ತ ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್ಎಸ್ ಅನ್ನು ಎದುರಿಸಲು ಸಜ್ಜಾಗಿದೆ. ರಾಹುಲ್ ಅವರ ರಾಜಸ್ಥಾನ ಭೇಟಿಯು ಈ ರಾಜ್ಯಗಳ ಚುನಾವಣೆಯ ಕಾರ್ಯತಂತ್ರದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ. "ಭಾರತ್ ಜೋಡೋ ಯಾತ್ರೆಯ ನಂತರ ರಾಹುಲ್ ಗಾಂಧಿ ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಮೌಂಟ್ ಅಬುವಿನಲ್ಲಿ ಕಾರ್ಯಕರ್ತರಿಗೆ ತರಬೇತಿ ಮತ್ತು ಸಂವಾದ ಶಿಬಿರ ಸಂಗಮ್ ನಲ್ಲಿ ಅವರು ಭಾಗವಹಿಸಲಿದ್ದಾರೆ" ಎಂದು ಎಐಸಿಸಿ ಕಾರ್ಯದರ್ಶಿ ರಾಜಸ್ಥಾನದ ಉಸ್ತುವಾರಿ ವೀರೇಂದ್ರ ರಾಥೋಡ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಹಲವು ದಿನಗಳಿಂದ ನಡೆಯುತ್ತಿರುವ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಫೈಟ್ ಕೇಂದ್ರ ನಾಯಕತ್ವಕ್ಕೆ ಕಳವಳಕಾರಿಯಾಗಿದ್ದರೂ, ಇಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಆಸ್ತಿ ಎಂದು ಪಕ್ಷ ಪುನರುಚ್ಚರಿಸುತ್ತಿದೆ. ರಾಜಸ್ಥಾನವು ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರಗಳನ್ನು ಬದಲಾಯಿಸುವ ಸಂಪ್ರದಾಯವನ್ನು ಹೊಂದಿದೆ. ಆದರೆ, ಕಾಂಗ್ರೆಸ್ ಈ ಬಾರಿ ಮತ್ತೆ ಅಧಿಕಾರ ಹಿಡಿಯಲು ಶ್ರಮಿಸುತ್ತಿದೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ 2018ರ ಗೆಲುವನ್ನು ಪುನರಾವರ್ತಿಸಲು ಶ್ರಮಿಸುತ್ತಿದೆ. ಆಗ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಕಮಲ್ ನಾಥ್ ಅವರು ಪಕ್ಷವನ್ನು ಅಧಿಕಾರಕ್ಕೆ ತಂದು ಸಿಎಂ ಆಗಿದ್ದರು. ಆದರೆ, ಪ್ರಭಾವಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಗೆ ಸೇರಿದ ನಂತರ 2020 ರಲ್ಲಿ ಅವರ ಸರ್ಕಾರ ಪತನಗೊಂಡಿತ್ತು. "ನಾನು ಇಂದು ನಾರಿ ಸಮ್ಮಾನ್ ಯೋಜನೆಯನ್ನು ಪ್ರಾರಂಭಿಸಿದ್ದೇನೆ. ನಾವು ಅಧಿಕಾರಕ್ಕೆ ಬಂದಾಗ ರಾಜ್ಯದ ಎಲ್ಲ ಮಹಿಳೆಯರು ತಿಂಗಳಿಗೆ 1500 ರೂ.ಗಳ ಭತ್ಯೆ ಮತ್ತು 500 ರೂ.ಗೆ ಎಲ್ಪಿಜಿ ಸಿಲಿಂಡರ್ಗಳಿಗೆ ನೋಂದಾಯಿಸಿಕೊಳ್ಳಲು ಸ್ವಾಗತವಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಆಯಾ ಪ್ರದೇಶಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ನಾನು ಕೇಳಿಕೊಂಡಿದ್ದೇನೆ" ಎಂದು ಕಮಲ್ ನಾಥ್ ಹೇಳಿದ್ದಾರೆ.
ರಾಜಸ್ಥಾನದ ಉಸ್ತುವಾರಿ ಎಐಸಿಸಿ ಕಾರ್ಯದರ್ಶಿ ಸಿಪಿ ಮಿತ್ತಲ್ ಮಾತನಾಡಿ, "ಈ ಯೋಜನೆಯು ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಮಹಿಳಾ ಭತ್ಯೆಯ ಮಾದರಿಯಾಗಿದೆ 500 ರೂ.ಗಳ ಎಲ್ಪಿಜಿ ಯೋಜನೆಯು ರಾಜಸ್ಥಾನದ ಮಾದರಿಯಾಗಿದೆ ಎಂದು ತಿಳಿಸಿದರು. ಸೋಮವಾರ ತೆಲಂಗಾಣದಲ್ಲಿ ಪಕ್ಷದ ಯುವ ಪ್ರಣಾಳಿಕೆಯನ್ನು ಅನಾವರಣಗೊಳಿಸಿದ ಪ್ರಿಯಾಂಕಾ, ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ಆಂದೋಲನದಲ್ಲಿ ಮಡಿದವರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗ, ಹುತಾತ್ಮರ ಅವಲಂಬಿತರಿಗೆ 25,000 ರೂ.ಗಳ ಪಿಂಚಣಿ, ಯುವಕರಿಗೆ 4,000 ರೂ.ಗಳ ನಿರುದ್ಯೋಗ ಭತ್ಯೆ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯರಿಗೆ ಇ-ಸ್ಕೂಟರ್ ನೀಡುವುದಾಗಿ ಭರವಸೆ ನೀಡಿದ್ದರು.
ಇದನ್ನೂ ಓದಿ:ಕರ್ನಾಟಕ ಚುನಾವಣೆಗೆ ಮತ ಹಾಕಲು ವೇತನಸಹಿತ ರಜೆ ನೀಡಿದ ಗೋವಾ ಸರ್ಕಾರ