ಬಾಪಟ್ಲಾ, ಆಂಧ್ರಪ್ರದೇಶ: 10ನೇ ತರಗತಿ ಓದುತ್ತಿದ್ದ ಬಾಲಕನೊಬ್ಬನ ಮೇಲೆ ಯುವಕನೊಬ್ಬ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿರುವ ಘಟನೆ ಬಾಪಟ್ಲಾ ಜಿಲ್ಲೆಯ ಚೆರುಕುಪಲ್ಲಿ ತಾಲೂಕಿನ ರಾಜೋಲು ಎಂಬಲ್ಲಿ ಶುಕ್ರವಾರ ಬೆಳಗ್ಗೆ ನಡೆದಿತ್ತು. ಈ ಘಟನೆ ಕುರಿತು ಕೆಲವೊಂದು ವಿಷಯಗಳನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಚೆರುಕುಪಲ್ಲಿ ತಾಲೂಕಿನ ಉಪ್ಪಳ ಅಮರನಾಥ್ (14) ಅವರ ತಂದೆ ಬಾಲ್ಯದಲ್ಲಿಯೇ ತೀರಿಕೊಂಡಿದ್ದು, ತಾಯಿ, ಸಹೋದರಿ, ತಾತನೊಂದಿಗೆ ವಾಸವಾಗಿದ್ದಾರೆ. ರಾಜೋಲು ಪಂಚಾಯಿತಿ ರೆಡ್ಲಪಾಲೇನಿ ನಿವಾಸಿ ಪಾಮು ವೆಂಕಟೇಶ್ವರ ರೆಡ್ಡಿ ಅಮರನಾಥ್ ಅಕ್ಕಳಿಗೆ ಪ್ರೀತಿಯ ಹೆಸರಲ್ಲಿ ಕಾಡುತ್ತಿದ್ದನಂತೆ. ಇದರ ಬಗ್ಗೆ ವೆಂಕಟೇಶ್ವರ್ ರೆಡ್ಡಿಗೆ ಅಮರನಾಥ್ ಎಚ್ಚರಿಕೆ ನೀಡಿದ್ದಾನೆ. ಹೀಗಾಗಿ ಅಮರನಾಥ್ ಮೇಲೆ ದ್ವೇಷ ಬೆಳಸಿಕೊಂಡು ವೆಂಕಟೇಶ್ವರ್ ರೆಡ್ಡಿ ಈ ಕೃತ್ಯ ಎಸಗಿದ್ದಾನೆ ಎಂದು ಮೃತನ ಕುಟುಂಬದವರು ಆರೋಪಿಸಿದ್ದಾರೆ.
ಆರೋಪಿಗಳು ವೈಕಾಪಾ ಪಕ್ಷದ ಪ್ರಾಬಲ್ಯವಿರುವ ಗ್ರಾಮಕ್ಕೆ ಸೇರಿದವರಾಗಿದ್ದಾರಂತೆ. ಇದರಿಂದ ಘಟನೆಯ ಕಾರಣಗಳನ್ನು ಬದಿಗೊತ್ತಲು ಹಲವು ಅಂಶಗಳು ಮುನ್ನೆಲೆಗೆ ಬರುತ್ತಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಷ್ಟೇ ಅಲ್ಲ ಸಂತ್ರಸ್ತರಿಂದ ದೂರು ಬಂದ ನಂತರವೇ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಪೊಲೀಸರು ಹೇಳಿದ್ದು, ವಿಳಂಬ ಧೋರಣೆ ತಾಳಿತ್ತು. ಕೊನೆಗೆ ಬಾಲಕನ ತಾಯಿ ಬಂದು ದೂರು ನೀಡಿದ ನಂತರವೇ ಪ್ರಕರಣ ದಾಖಲಾಗಿದೆ.
ನಡೆದಿದ್ದೇನು?: 10ನೇ ತರಗತಿ ಓದುತ್ತಿರುವ ಅಮರನಾಥ್ ಟ್ಯೂಷನ್ಗೆಂದು ಪ್ರತಿದಿನ ಸೈಕಲ್ನಲ್ಲಿ ರಾಜೋಲುವಿಗೆ ಹೋಗುತ್ತಿದ್ದನು. ಇದೇ ರಸ್ತೆಯಲ್ಲಿರುವ ರೆಡ್ಲಪಾಲೇನಿಯ ಪಾಮು ವೆಂಕಟೇಶ್ವರ ರೆಡ್ಡಿ ಇಟ್ಟಿಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲ ದಿನಗಳಿಂದ ತನ್ನ ಅಕ್ಕಳನ್ನು ಹಿಂಬಾಲಿಸುತ್ತಿರುವುದನ್ನು ತಿಳಿದ ಅಮರನಾಥ್ ನಾಲ್ಕು ಜನಗಳ ಮಧ್ಯೆ ವೆಂಕಟೇಶ್ವರ ರೆಡ್ಡಿಯ ಮಾನ ಮರ್ಯಾದೆಯನ್ನು ಹರಾಜು ಹಾಕಿದ್ದಾನೆ. ಇದರಿಂದ ಕೋಪಗೊಂಡ ವೆಂಕಟೇಶ್ವರ್ ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಟ್ಯೂಷನ್ಗೆ ತೆರಳುತ್ತಿದ್ದ ಅಮರನಾಥ್ನನ್ನು ಇತರ ಕೆಲ ಸ್ನೇಹಿತರೊಂದಿಗೆ ಅಡ್ಡಗಟ್ಟಿದ್ದಾರೆ. ಬಳಿಕ ಜೋಳದ ಚೀಲಗಳ ಲಾಟ್ಗಳ ಹಿಂದೆ ಕರೆದೊಯ್ದು ಅಮರನಾಥ್ನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಸಂತ್ರಸ್ತೆನ ಕೂಗು ಕೇಳಿ ಸಮೀಪದಲ್ಲೇ ವಾಸವಾಗಿರುವ ಮೂರ್ತಿ ಬಾಲಕನ ಸಹಾಯಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದರು. ಬಳಿಕ ಅಮರನಾಥ್ ಕುಟುಂಬಸ್ಥರಿಗೆ ಮಾಹಿತಿ ರವಾನಿಸಿದರು. ಇನ್ನು 108ಕ್ಕೆ ಕರೆ ಮಾಡಿದಾಗ ಆಂಬ್ಯುಲೆನ್ಸ್ ತಡವಾಗುತ್ತೆ ಎಂದು ತಿಳಿದು ಬಂದಿದೆ. ಕೂಡಲೇ ಬಾಲಕನನ್ನು ಖಾಸಗಿ ವಾಹನದಲ್ಲಿ ಗುಂಟೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಪೊನ್ನೂರು ಗ್ರಾಮದ ಬಳಿ 108 ಆಂಬ್ಯುಲೆನ್ಸ್ ವಾಹನ ಎದುರಾಗಿದ್ದು, ಬಾಲಕನನ್ನು ಅದರೊಳಗೆ ಶಿಫ್ಟ್ ಮಾಡಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.
ಬಾಲಕ ಕೊನೆಯ ಮಾತುಗಳು..: ಮಾರ್ಗಮಧ್ಯೆ ಬಾಲಕನಿಗೆ ಘಟನೆ ಹೇಗಾಯಿತು ಎಂದು ಕುಟುಂಬಸ್ಥರು ಪ್ರಶ್ನಿಸಿದಾಗ, ‘ಚಿಲಾರಕೊಟ್ಟು ವೆಂಕಿ ಸೇರಿ ಮೂವರು ನನನ್ನು ಥಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ’ ಎಂದು ಅಮರನಾಥ್ ಹೇಳಿದ್ದಾರೆ. ಇದನ್ನು ಕುಟುಂಬಸ್ಥರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಇನ್ನು ಬಾಲಕ ಆಸ್ಪತ್ರೆಗೆ ತಲುಪಿದ ಸ್ವಲ್ಪ ಸಮಯದಲ್ಲೇ ಮೃತಪಟ್ಟಿದ್ದಾನೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಟಿಡಿಇಪಿಎ ಸೇರಿದಂತೆ ಹಲವು ಸಾರ್ವಜನಿಕ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ಗ್ರಾಮದಲ್ಲಿ ಪೋಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಘಟನೆ ನಡೆದ ಸ್ಥಳಕ್ಕೆ ರಾಯಪಲ್ಲಿ ಡಿಎಸ್ಪಿ ಮುರಳಿಕೃಷ್ಣ ಭೇಟಿ ನೀಡಿ ಘಟನೆಯ ಹಿಂದಿನ ಕಾರಣಗಳನ್ನು ತಿಳಿದುಕೊಂಡಿದ್ದಾರೆ. ಬಾಲಕನ ತಾಯಿ ನೀಡಿದ ದೂರಿನಂತೆ ಪಾಮು ವೆಂಕಟೇಶ್ವರ ರೆಡ್ಡಿ ಹಾಗೂ ಆತನ ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮತ್ತೊಂದೆಡೆ ಬಾಲಕ ಅಮರನಾಥ್ ಗುರುವಾರ ರಾತ್ರಿ ಸ್ಥಳೀಯ ಸಣ್ಣ ವ್ಯಾಪಾರಿಯಿಂದ ಲೀಟರ್ ಪೆಟ್ರೋಲ್ ಖರೀದಿಸಿದ್ದಾನೆ ಎಂದು ಕೆಲವರು ಹೇಳಿದ್ದು, ಗೊಂದಲ ಉಂಟಾಗಿದೆ. ಕೊನೆಗೆ ಆರೋಪಿ ವೆಂಕಟೇಶ್ವರ ರೆಡ್ಡಿ ಸಂತ್ರನೊಂದಿಗೆ ಮಾತನಾಡಿರುವುದಾಗಿ ಮೂರ್ತಿ ಹೇಳಿದ ಬಳಿಕ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಶುಕ್ರವಾರ ರಾತ್ರಿ 8ರ ನಂತರ ಎಸ್ಪಿ ವಕುಲ್ ಜಿಂದಾಲ್, ಎಎಸ್ಪಿ ಮಹೇಶ್, ರಾಯಪಲ್ಲಿ ಆರ್ಡಿಒ ಪಾರ್ಥಸಾರಥಿ ಸೇರಿದಂತೆ ಘಟನೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಖಚಿತ ಮಾಹಿತಿ ಲಭ್ಯವಾಗಿದೆ.
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಸಂತಾಪ: ಬಾಲಕನ ಸಜೀವ ದಹನ ಸುದ್ದಿ ತಿಳಿದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಆಘಾತ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡುವವರ ಬಗ್ಗೆ ಪೊಲೀಸರು ತೋರುತ್ತಿರುವ ಮೃದು ಧೋರಣೆಯೇ ಇಂತಹ ದೌರ್ಜನ್ಯಕ್ಕೆ ಕಾರಣ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಓದಿ: ಟ್ಯೂಷನ್ ಮುಗಿಸಿಕೊಂಡ ಬರುತ್ತಿದ್ದ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಸ್ನೇಹಿತ!