ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಾಳೆ ಹೊಸ ಇತಿಹಾಸ ನಿರ್ಮಾಣಗೊಳ್ಳಲಿದೆ. ಮಹಾ ಗಂಗಾರತಿ (Ganga Aarti) ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನ ಅರ್ಚಕರಾಗಿ ಯುವತಿಯರು (Girls to perform Gangarati) ಗಂಗಾ ಆರತಿ ನಡೆಸಿಕೊಡಲಿದ್ದಾರೆ.
ಪ್ರತಿವರ್ಷ ಕಾರ್ತಿಕ ಪೂರ್ಣಿಮೆಯ ದಿನ 'ದೇವ್ ದೀಪಾವಳಿ' (Dev Deepawali) ಆಚರಣೆ ಮಾಡಲಾಗುತ್ತಿದ್ದು, ವಾರಣಾಸಿಯಲ್ಲಿ ಗಂಗಾ ಆರತಿ ನಡೆಯುತ್ತದೆ. ಆದರೆ ಇದೇ ಪ್ರಥಮ ಬಾರಿಗೆ ಶೀಟ್ಲಾ ಘಾಟ್ನಲ್ಲಿ ಪ್ರಧಾನ ಅರ್ಚಕರಾಗಿ ಹೆಣ್ಣುಮಕ್ಕಳು ಮಹಾ ಗಂಗಾರತಿಯಲ್ಲಿ ಭಾಗಿಯಾಗಲಿದ್ದಾರೆ.
ಇದಕ್ಕಾಗಿ ಸಂಘಟಕರು ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು 84 ಘಾಟ್ಗಳಲ್ಲಿ 12 ಲಕ್ಷಕ್ಕೂ ಹೆಚ್ಚು ದೀಪ ಬೆಳಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿ ವರ್ಷ ಯುವತಿಯರು ರಿದ್ಧಿ-ಸಿದ್ಧಿ ಆರತಿಯಲ್ಲಿ ಮಾತ್ರ ಭಾಗಿಯಾಗುತ್ತಿದ್ದರು. ಆದರೆ ಇದೀಗ ಪುರುಷ ಅರ್ಚಕರ ಜಾಗದಲ್ಲಿ ಪ್ರಧಾನ ಅರ್ಚಕರಾಗಿ ಐವರು ಹುಡುಗಿಯರು ನೇಮಕಗೊಂಡಿದ್ದಾರೆ.
ಇದನ್ನೂ ಓದಿರಿ: 20 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿ ಆತ್ಮಹತ್ಯೆಗೆ ಶರಣು
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಗಂಗೋತ್ರಿ ಸೇವಾ ನಿಧಿಯ ಸಂಚಾಲಕ ದಿನೇಶ್ ಮಹಾರಾಜ್, ಪೂಜೆಯಲ್ಲಿ ಪುರುಷ ಪುರೋಹಿತರಿಗೆ ಪ್ರಾಮುಖ್ಯತೆ ನೀಡುತ್ತಿದ್ದ ಕಾಲವೊಂದಿತ್ತು. ಆದರೆ ಇಂದು 21ನೇ ಶತಮಾನದಲ್ಲಿ ಹೆಣ್ಣು ಮಕ್ಕಳು ಯಾಗ ಮಾಡುತ್ತಿರುವ ಕಾರಣ ಅವರಿಂದಲೇ ಗಂಗಾ ಆರತಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ರಧಾನ ಅರ್ಚಕರಾಗಿ ಆಯ್ಕೆಯಾಗಿರುವ ಹುಡುಗಿಯರಿಗೆ ಸಂದ ಗೌರವ ಇದಾಗಿದ್ದು, ಕಾಶಿಯಿಂದಲೇ ಮಹಿಳಾ ಸಬಲೀಕರಣದ ಸಂದೇಶ ಇಡೀ ಜಗತ್ತಿಗೆ ಹೋಗಲಿದೆ ಎಂದರು.