ನವದೆಹಲಿ: ಪಂಜಾಬ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗಿರುವ ಭದ್ರತಾ ಲೋಪ ಕೇವಲ ಕಾಕತಾಳೀಯವಲ್ಲ. ಇದು ಪ್ರಧಾನಿ ಅವರನ್ನು ಸಾವಿನ ದವಡೆಗೆ ಸಿಲುಕಿಸುವ ಉದ್ದೇಶ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಈಟಿವಿ ಭಾರತ್ ಜೊತೆ ಮಾತನಾಡಿರುವ ಅವರು, ಮಹಾದೇವನ ಕೃಪೆಯಿಂದಲೇ ಮೋದಿಯವರು ರಕ್ಷಣೆಗೊಳಪಟ್ಟಿದ್ದು, ಡ್ರೋನ್ ಅಥವಾ ಟೆಲಿಸ್ಕೋಪಿನಿಂದ ಪ್ರಧಾನಿಯನ್ನು ಕೊಲ್ಲಬಹುದಿತ್ತು ಎಂದು ಹೇಳಿದ್ದಾರೆ. ಸರಿಯಾದ ಹಾದಿಯಲ್ಲಿ ತನಿಖೆ ನಡೆದರೆ ಪಂಜಾಬ್ ಮುಖ್ಯಮಂತ್ರಿ ಸೇರಿದಂತೆ ಅನೇಕ ಪ್ರಮುಖ ನಾಯಕರ ಹೆಸರುಗಳು ಈ ಪಿತೂರಿಯಿಂದ ಬಹಿರಂಗಗೊಳ್ಳಲಿವೆ ಎಂದರು.
ಪ್ರಧಾನಿ ಮೋದಿಯವರ ಭದ್ರತಾ ವೈಫಲ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಪಂಜಾಬ್ ಸರ್ಕಾರ ಮತ್ತು ಕಾಂಗ್ರೆಸ್ ಅನ್ನು ದೇಶದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದಿರುವ ಕೇಂದ್ರ ಸಚಿವರು, ಪಂಜಾಬ್ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಆರು ವರ್ಷದ ಮಗನ ಕತ್ತು ಹಿಸುಕಿ ಕೊಲೆಗೈದು, ತಂದೆ ಆತ್ಮಹತ್ಯೆ
ಜನವರಿ 5ರಂದು ಪಂಜಾಬ್ನ ಫಿರೋಜ್ಪುರದ ಹುಸೇನಿವಾಲಾ ಬಳಿ ಪ್ರಧಾನಿ ನರೇಂದ್ರ ಮೋದಿ 15-20 ನಿಮಿಷಗಳ ಕಾಲ ಫ್ಲೈಓವರ್ ಬಳಿ ಭದ್ರತೆ ಇಲ್ಲದೇ ಸಿಲುಕಿಕೊಂಡಿದ್ದರು. ಈ ಪ್ರಕರಣ ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ಕೇಂದ್ರ ಗೃಹ ಸಚಿವಾಲಯದಿಂದ ತನಿಖೆಗೊಳಪಟ್ಟಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಪಂಜಾಬ್ ಕಾಂಗ್ರೆಸ್ನಿಂದ ವರದಿ ಕೇಳಿದ್ದಾರೆ.