ಡೆಹ್ರಾಡೂನ್ (ಉತ್ತರಾಖಂಡ) : ಅಳಿವಿನಂಚಿನಲ್ಲಿರುವ ಬಂಗಾಳ ಹುಲಿಗಳ ಸಂರಕ್ಷಣಾ ತಾಣವಾಗಿರುವ ವಿಶ್ವವಿಖ್ಯಾತ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಆರು ಸಾವಿರ ಮರಗಳ ಹರಣ ನಡೆಸಲಾಗಿದ್ದು, ಈ ಬಗ್ಗೆ ಹೈಕೋರ್ಟ್ ಗರಂ ಆಗಿದೆ. ಈ ಬಗ್ಗೆ ಸಿಬಿಐ ತನಿಖೆ ಯಾಕೆ ಮಾಡಿಸಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
2017 ರಿಂದ 2022 ರ ನಡುವೆ ಟೈಗರ್ ಸಫಾರಿ ಮತ್ತು ಇತರ ಪ್ರವಾಸಿ ಸೌಲಭ್ಯಗಳಿಗಾಗಿ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಮರಗಳ ಮಾರಣಹೋಮ ನಡೆಸಲಾಗಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ಉದ್ಯಾನವನದಲ್ಲಿ ಕಟ್ಟಡಗಳು ಮತ್ತು ಅವುಗಳಿಗೆ ದೊಡ್ಡ ಗೋಡೆಗಳನ್ನು ನಿರ್ಮಿಸಲಾಗಿದೆ. ಸಂರಕ್ಷಿತ ಅಭಯಾರಣ್ಯದಲ್ಲಿ ಅಕ್ರಮ ಚಟುವಟಿಕೆಯಾಗಿದೆ ಎಂದು ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ಪೀಠವು ಪ್ರಕರಣದ ಗಂಭೀರತೆ ಮತ್ತು ಉನ್ನತ ಅಧಿಕಾರಿಗಳ ಅನುಮಾನಾಸ್ಪದ ಪಾತ್ರ ಪರಿಗಣಿಸಿ ಸಿಬಿಐ ತನಿಖೆ ಏಕೆ ನೀಡಬಾರದು? ಎಂದು ಪ್ರಶ್ನಿಸಿದೆ.
ಪ್ರಕರಣದಲ್ಲಿ ಅರಣ್ಯ ಸಚಿವರ ಪಾತ್ರ?: ಮರಗಳ ಮಾರಣಹೋಮ ನಡೆದ ಅವಧಿಯಲ್ಲಿ ಹರಕ್ ಸಿಂಗ್ ರಾವತ್ ಅವರು ಅರಣ್ಯ ಸಚಿವರಾಗಿದ್ದರು. ಅವರ ಅವಧಿಯಲ್ಲೇ ಈ ಅಕ್ರಮ ಚಟುವಟಿಕೆಗಳು ನಡೆದಿವೆ ಎಂದು ಡೆಹ್ರಾಡೂನ್ ನಿವಾಸಿ ಅನು ಪಂತ್ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಕಾರ್ಬೆಟ್ನಲ್ಲಿ 6 ಸಾವಿರಕ್ಕೂ ಅಧಿಕ ಮರಗಳನ್ನು ಕಡಿಯಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ವರದಿಗಳನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು. ಈ ಎಲ್ಲ ವರದಿಗಳನ್ನು ಅರ್ಜಿದಾರರ ಪರ ವಕೀಲ ಅಭಿಜಯ್ ನೇಗಿ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ವಿವಿಧ ವರದಿಗಳಲ್ಲಿ ಅಂದಿನ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಮತ್ತು ಇತರ ಉನ್ನತ ಅರಣ್ಯ ಅಧಿಕಾರಿಗಳ ಹೆಸರು ತಳುಕು ಹಾಕಿಕೊಂಡಿದೆ. ಇಷ್ಟಾದರೂ, ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರದ ಪರ ವಕೀಲರನ್ನು ನ್ಯಾಯಾಲಯ ವಿಚಾರಣೆಯ ವೇಳೆ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ವಕೀಲರು ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯದ ಮುಂದೆ ಸರಿಯಾದ ಮಾಹಿತಿಯನ್ನು ನೀಡಲಿದ್ದಾರೆ ಎಂದು ಹೇಳಿದರು.
ಕೇಂದ್ರ ಸಶಕ್ತ ಸಮಿತಿಯ ವರದಿಯಲ್ಲಿ ಆಗಿನ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಅವರ ಹೆಸರೂ ಪ್ರಮುಖವಾಗಿದೆ. ವರದಿಯನ್ನು ನ್ಯಾಯಾಲಯಕ್ಕೂ ಸಲ್ಲಿಸಲಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್ಜಿಟಿ) ಸಲ್ಲಿಸಿರುವ ವರದಿಯಲ್ಲೂ ಮಾಜಿ ಅರಣ್ಯ ಸಚಿವರ ಹೆಸರೂ ಇದೆ. ಈ ಕುರಿತ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಜನರು 2 ರಿಂದ 4 ತಿಂಗಳು ಈರುಳ್ಳಿ ತಿನ್ನದಿದ್ದರೆ ವ್ಯತ್ಯಾಸವಾಗೋದಿಲ್ಲ: ಮಹಾರಾಷ್ಟ್ರ ಸಚಿವ ದಾದಾ ಭೂಸೆ