ಕೋಟಾ (ರಾಜಸ್ಥಾನ) : ರಾಜಸ್ಥಾನದ ಕೋಟಾದ ರಾಮಗಂಜ್ ಮಂಡಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಮದನ್ ದಿಲಾವರ್ ಅವರು ಪ್ರತಿಭಟನಾನಿರತ ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಹಕ್ಕಿ ಜ್ವರ ಹರಡಲು ಪ್ರತಿಭಟನಾನಿರತ ರೈತರೇ ಕಾರಣವೆಂದು ಹೇಳಿದ್ದಾರೆ. ಪ್ರತಿಭಟನಾಕಾರರು "ಚಿಕನ್ ಬಿರಿಯಾನಿ ಮತ್ತು ಡ್ರೈ ಫ್ರೂಟ್ಸ್ಗಳನ್ನು ತಿನ್ನುತ್ತ ವಿರಾಮವಾಗಿ ಆನಂದಿಸುತ್ತಿದ್ದಾರೆ. ಇದು ರೋಗವನ್ನು ಹರಡುವ ಪಿತೂರಿಯಾಗಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದವರಲ್ಲಿ ಭಯೋತ್ಪಾದಕರು, ದರೋಡೆಕೋರರು ಮತ್ತು ಕಳ್ಳರೂ ಇರಬಹುದು, ಅವರು ರೈತರ ಶತ್ರುಗಳೂ ಆಗಿರಬಹುದು. ಈ ಜನರೆಲ್ಲರೂ ದೇಶವನ್ನು ಹಾಳುಮಾಡಲು ಬಯಸುತ್ತಿದ್ದಾರೆ. ಸರ್ಕಾರವು ಅವರನ್ನು ಆಂದೋಲನದ ಸ್ಥಳಗಳಿಂದ ಓಡಿಸಿ, ಹಕ್ಕಿ ಜ್ವರ ತಡೆಗಟ್ಟಬೇಕು, ಇಲ್ಲವಾದರೆ ಮುಂದೆ ಹಕ್ಕಿ ಜ್ವರ ದೊಡ್ಡ ಸಮಸ್ಯೆಯಾಗಬಹುದು." ಎಂದು ಬಿಜೆಪಿ ಶಾಸಕ ಮದನ್ ದಿಲಾವರ್ ಹೇಳಿದ್ದಾರೆ.