ಹೈದರಾಬಾದ್: ಮೇ 2 ರಂದು ಪಂಚರಾಜ್ಯ ವಿಧಾನಸಭಾ ಚುನಾವಣೆಗಳ ಮತಎಣಿಕೆ ನಡೆಯಲಿದ್ದು, ಅಸ್ಸೋಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿಗಳಲ್ಲಿನ ಚುನಾವಣಾ ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
ಬಂಗಾಳದ ಮತದಾನೋತ್ತರ ಸಮೀಕ್ಷೆ ಏನು ಹೇಳುತ್ತೆ?:
![ETV Bharat Exit Poll](https://etvbharatimages.akamaized.net/etvbharat/prod-images/11588062_a.jpg)
ಈ ಬಾರಿಯ ಚುನಾವಣೆಯಲ್ಲಿ ಪ. ಬಂಗಾಳವು ಇಡೀ ರಾಷ್ಟ್ರದ ಗಮನ ಸೆಳೆದಿದೆ. 294 ವಿಧಾನಸಭಾ ಸದಸ್ಯ ಬಲದ ಈ ರಾಜ್ಯದಲ್ಲಿ ಚುನಾವಣಾ ಆಯೋಗವು ಎಂಟು ಹಂತಗಳಲ್ಲಿ ಚುನಾವಣೆ ನಡೆಸಿದೆ. ಈ ಬಾರಿ ಹೇಗಾದರೂ ಮಾಡಿ ಮಮತಾ ದೀದಿಯಿಂದ ಅಧಿಕಾರ ಕಸಿದುಕೊಳ್ಳಲೇಬೇಕೆಂದು ಪಣತೊಟ್ಟ ಕಮಲ ಪಡೆಯು ಶತಾಯಗತಾಯ ಪ್ರಯತ್ನ ಮಾಡಿದೆ. ಎಡ ಪಕ್ಷಗಳು ಹಾಗೂ ಕಾಂಗ್ರೆಸ್ ಸಹ ಅಧಿಕಾರದ ರೇಸ್ನಲ್ಲಿ ಹಿಂದೆ ಬಿದ್ದಿಲ್ಲ. ಮುಸ್ಲಿಂ ಧರ್ಮ ಗುರು ಪೀರಜಾದಾ ಅಬ್ಬಾಸ್ ಸಿದ್ದಿಕಿ ಅವರ ಆಲ್ ಇಂಡಿಯಾ ಸೆಕ್ಯೂಲರ್ ಫ್ರಂಟ್ ಪಕ್ಷದೊಂದಿಗೆ ಇವು ಮೈತ್ರಿ ಮಾಡಿಕೊಂಡಿವೆ.
ಪಶ್ಚಿಮ ಬಂಗಾಳದಲ್ಲಿ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಾವಿನ ಕಾರಣದಿಂದ 294ರ ಪೈಕಿ 292 ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆ ನಡೆದಿದೆ. ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ತಮ್ಮ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಂತು ಮತ್ತೆ ಅಧಿಕಾರ ಉಳಿಸಿಕೊಳ್ಳಲು ತಮ್ಮೆಲ್ಲ ಶಕ್ತಿಯೊಂದಿಗೆ ಚುನಾವಣಾ ಕಣಕ್ಕಿಳಿದು ಪ್ರಚಾರ ಮಾಡಿದ್ದಾರೆ. ಎಲ್ಲ ಅಡೆತಡೆಗಳ ಮಧ್ಯೆಯೂ ಕಿಂಚಿತ್ತೂ ಹೆದರದ ಮಮತಾ ದೀದಿ ಬಿಜೆಪಿ ವಿರುದ್ಧ ನಂದಿಗ್ರಾಮದಲ್ಲಿಯೇ ಹೋರಾಟದ ಕಹಳೆ ಊದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ದುರ್ಬಲವಾಗುತ್ತಿದ್ದಂತೆಯೇ ಆ ಜಾಗವನ್ನು ಆಕ್ರಮಿಸಿರುವ ಬಿಜೆಪಿ ಈ ಬಾರಿ ಹೇಗಾದರೂ ಮಾಡಿ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಮಾಡಿದೆ. ಈವರೆಗೆ ಯಾವತ್ತೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ರುಚಿ ನೋಡದ ಬಿಜೆಪಿಗೆ ಈ ಚುನಾವಣೆ ಭಾರಿ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಹಿಡಿದು ಗೃಹ ಮಂತ್ರಿ ಅಮಿತ್ ಶಾ ಸೇರಿದಂತೆ ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ವರೆಗೆ ಎಲ್ಲರೂ ಹಲವಾರು ಸುತ್ತುಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಮಾಡಿದ್ದು ಗಮನಾರ್ಹ ಸಂಗತಿ.
ಮತದಾನೋತ್ತರ ಸಮೀಕ್ಷೆಗಳನ್ನು ನೋಡಿದಲ್ಲಿ ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 126 ಹಾಗೂ ತೃಣಮೂಲ ಕಾಂಗ್ರೆಸ್ 131 ಸ್ಥಾನಗಳಲ್ಲಿ, ಎಡಪಕ್ಷಗಳು ಹಾಗೂ ಮಿತ್ರರು 32 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜು ಮಾಡಲಾಗಿದೆ. ಹೀಗಾಗಿ ಯಾವುದೇ ಪಕ್ಷಕ್ಕೂ ಪೂರ್ಣ ಬಹುಮತ ಸಿಗದ ಕಾರಣ ರಾಜ್ಯದಲ್ಲಿ ಶಾಸಕರ ಕುದುರೆ ವ್ಯಾಪಾರ ಶುರುವಾಗಲಿದೆಯಾ ಎಂಬ ಆತಂಕ ಮನೆ ಮಾಡಿದೆ. ಆದರೆ ಎಲ್ಲದಕ್ಕೂ ಮೇ 2 ರಂದು ಸ್ಪಷ್ಟ ಉತ್ತರ ಸಿಗಲಿದೆ.
ಅಸ್ಸೋಂ ನಲ್ಲಿ ಅಧಿಕಾರ ಉಳಿಸಿಕೊಳ್ಳಲಿದೆಯಾ ಬಿಜೆಪಿ? :
![ETV Bharat Exit Poll](https://etvbharatimages.akamaized.net/etvbharat/prod-images/11588062_c.jpg)
ಹಚ್ಚ ಹಸಿರಾದ ಟೀ ತೋಟಗಳು, ಗುಡ್ಡ ಬೆಟ್ಟಗಳಿಂದ ಆವೃತವಾದ ಅಸ್ಸೋಂ ನಲ್ಲಿ 3 ಹಂತಗಳಲ್ಲಿ ಚುನಾವಣೆ ನಡೆದಿದೆ. ಇಲ್ಲಿ ಕಾಂಗ್ರೆಸ್ ನೇತೃತ್ವದ ಎಐಯುಡಿಎಫ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಇತ್ತು. ಈ ರಾಜ್ಯದಲ್ಲಿ ಈಟಿವಿ ಭಾರತ ನಡೆಸಿದ ಎಕ್ಸಿಟ್ ಪೋಲ್ನಲ್ಲಿ ಹಲವಾರು ರೋಚಕ ಸಂಗತಿಗಳು ಬಯಲಾಗಿವೆ.
ಸಮೀಕ್ಷೆಯ ಪ್ರಕಾರ 126 ಸದಸ್ಯ ಬಲದ ಅಸ್ಸೋಂ ವಿಧಾನಸಭೆಯಲ್ಲಿ ಬಿಜೆಪಿ 64 ಹಾಗೂ ಎಐಯುಡಿಎಫ್ 55 ಸ್ಥಾನಗಳನ್ನು ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಹೊಸದಾಗಿ ರಚಿಸಲಾದ ಅಸೋಂ ಜತಿಯಾ ಪರಿಷದ್ ಹಾಗೂ ಪಕ್ಷೇತರರು ಒಟ್ಟಾರೆಯಾಗಿ 7 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಗಳು ಹೇಳುತ್ತಿವೆ.
ಕಳೆದ 5 ವರ್ಷಗಳಲ್ಲಿ ಬಿಜೆಪಿ ತಾನು ಮಾಡಿದ ಅಭಿವೃದ್ಧಿ ಕಾರ್ಯಗಳ ಹೆಸರಲ್ಲಿ ಮತದಾರರಿಂದ ಮತ ಕೇಳಿತ್ತು. ಇನ್ನು ನಾಗರಿಕ ಹಕ್ಕು ಕಾಯ್ದೆಯನ್ನೇ ಪ್ರಮುಖ ಅಸ್ತ್ರವಾಗಿ ಮಾಡಿಕೊಂಡ ಕಾಂಗ್ರೆಸ್ ಅದರ ಭಾವನಾತ್ಮಕ ಪರಿಣಾಮಗಳ ಮೇಲೆ ಮತ ಕೇಳಿತ್ತು. ಮುಸ್ಲಿಂ ಮುಖಂಡ ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ತಾನು ಕಳೆದುಕೊಂಡ ಅಲ್ಪಸಂಖ್ಯಾತರ ಮತ ಬ್ಯಾಂಕ್ ಅನ್ನು ಗಟ್ಟಿಗೊಳಿಸಿಕೊಳ್ಳಲು ಕಾಂಗ್ರೆಸ್ ಈ ಬಾರಿ ಯತ್ನಿಸಿದೆ. ಆದರೆ ಸಮೀಕ್ಷೆಗಳ ಪ್ರಕಾರ ಈ ಬಾರಿಯೂ ಅಸ್ಸೋಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
ತಮಿಳುನಾಡಿನಲ್ಲಿ ಎಐಎಡಿಎಂಕೆ ಅಧಿಕಾರ ಅಂತ್ಯ ಸಾಧ್ಯತೆ! :
![ETV Bharat Exit Poll](https://etvbharatimages.akamaized.net/etvbharat/prod-images/11588062_d.jpg)
ತಮಿಳುನಾಡಿನಲ್ಲಿ ಈಟಿವಿ ಭಾರತ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳನ್ನು ನೋಡುವುದಾದರೆ, ಇಲ್ಲಿ ಅಧಿಕಾರಾರೂಢ ಎಐಎಡಿಎಂಕೆ ಅಧಿಕಾರಾ ಕಳೆದುಕೊಂಡು ಡಿಎಂಕೆ ಅಧಿಕಾರದ ಗದ್ದುಗೆ ಹಿಡಿಯುವ ಎಲ್ಲ ಲಕ್ಷಣಗಳಿವೆ. ಸಮೀಕ್ಷೆಯ ಪ್ರಕಾರ ಡಿಎಂಕೆ 133 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುವ ಸಾಧ್ಯತೆ ಇದೆ. ಇನ್ನು ಎಐಎಡಿಎಂಕೆ ಕೇವಲ 89 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡು ಪ್ರತಿಪಕ್ಷದ ಸ್ಥಾನದಲ್ಲಿ ಕೂರಬಹುದು. 12 ಸ್ಥಾನಗಳಲ್ಲಿ ಪಕ್ಷೇತರರು ಹಾಗೂ ಇತರೆ ಚಿಕ್ಕಪುಟ್ಟ ಪಕ್ಷಗಳು ಗೆಲ್ಲುವ ಸಾಧ್ಯತೆಗಳಿವೆ.
2016ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಿಂದ ಸೋಲನುಭವಿಸಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಈ ಬಾರಿ ನಿರಾಯಾಸವಾಗಿ ತಮಿಳುನಾಡಿನಲ್ಲಿ ಸರ್ಕಾರ ರಚಿಸಲಿದೆ ಎಂದು ಈಟಿವಿ ಭಾರತ ನಡೆಸಿದ ಎಕ್ಸಿಟ್ ಪೋಲ್ನಲ್ಲಿ ಗೊತ್ತಾಗಿದೆ. ಅಲ್ಲಿಗೆ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
ಡಿಎಂಕೆ ಪಕ್ಷದ ಯುವ ನೇತಾರ ಹಾಗೂ ಮುಂದಿನ ನಾಯಕ ಎಂದೇ ಪರಿಗಣಿಸಲ್ಪಟ್ಟಿರುವ ಉದಯನಿಧಿ ಸ್ಟಾಲಿನ್ ಚೆಪಾಕ್-ಟ್ರಿಪ್ಲಿಕೇನ್ ಕ್ಷೇತ್ರದಿಂದ ಗೆಲುವು ಸಾಧಿಸುವ ಎಲ್ಲ ಸಾಧ್ಯತೆಗಳಿವೆ. ಸದ್ಯ ಸಿಎಂ ಆಗಿರುವ ಎಡಪ್ಪಾಡಿ ಪಳನಿಸ್ವಾಮಿ ಅವರು ತಮ್ಮ ಸ್ವಕ್ಷೇತ್ರ ಎಡಪ್ಪಾಡಿಯಿಂದ ಗೆಲುವು ಸಾಧಿಸುವ ಸಾಧ್ಯತೆಗಳಿವೆ. ಆದರೆ ಇವರ ಸಚಿವ ಸಂಪುಟದಲ್ಲಿದ್ದ ಬಹುತೇಕ ಸಚಿವರು ಸೋಲು ಕಾಣಲಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇನ್ನು ಕೋವಿಲಪಟ್ಟಿಯಿಂದ ಎಐಎಡಿಎಂಕೆ ಪಕ್ಷದ ಮತ್ತೊಬ್ಬ ಪ್ರಮುಖ ನಾಯಕ ಟಿಟಿವಿ ದಿನಕರನ್ ಜಯಶಾಲಿಯಾಗಬಹುದು.
ಕೇರಳದಲ್ಲಿ ಎಡರಂಗಕ್ಕೆ ಮತ್ತೆ ಜೈ ಅನ್ನಲಿರುವ ಮತದಾರ:
![ETV Bharat Exit Poll](https://etvbharatimages.akamaized.net/etvbharat/prod-images/11588062_b.jpg)
ಈ ಬಾರಿಯ ಚುನಾವಣೆಯಲ್ಲಿ ಸಿಪಿಎಂ ನೇತೃತ್ವದ ಎಲ್ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್) ಒಕ್ಕೂಟವು ಸತತ ಎರಡನೇ ಬಾರಿ ಸರಳ ಬಹುಮತ ಪಡೆದು ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂಬುದು ಈಟಿವಿ ಭಾರತ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಅಲ್ಲಿಗೆ ಆಡಳಿತ ವಿರೋಧಿ ಅಲೆಯ ಅಂಶವು ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಕೆಲಸ ಮಾಡಿಲ್ಲ ಎಂಬುದು ಗೊತ್ತಾಗುತ್ತಿದೆ. ಕಳೆದ ಬಾರಿ ಎಲ್ಡಿಎಫ್ 93 ವಿಧಾನಸಭಾ ಸ್ಥಾನಗಳಲ್ಲಿ ಜಯ ಗಳಿಸಿತ್ತು. ಈ ಬಾರಿ 11 ಸ್ಥಾನಗಳಷ್ಟು ಕಡಿಮೆಯಾಗಿ 82 ಸ್ಥಾನಗಳನ್ನು ಎಲ್ಡಿಎಫ್ ಗೆಲ್ಲಬಹುದು ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಎಲ್ಡಿಎಫ್ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುವ ಸಾಧ್ಯತೆಗಳಿವೆ.
ಚುನಾವಣೆಯ ಆರಂಭದಲ್ಲಿ ಎಲ್ಡಿಎಫ್ ಮತದಾರರ ವಿಶ್ವಾಸ ಗಳಿಸುವಲ್ಲಿ ಬಹಳ ಮುಂದಿತ್ತು. ಆದರೆ ನಂತರದ ದಿನಗಳಲ್ಲಿ ಪ್ರತಿಪಕ್ಷ ಕಾಂಗ್ರೆಸ್, ಸರ್ಕಾರವು ಹಗರಣ ಹಾಗೂ ಸ್ವಹಿತಾಸಕ್ತಿಗಳಲ್ಲಿ ತೊಡಗಿದೆ ಎಂದು ವ್ಯಾಪಕ ಆರೋಪಗಳ ಸುರಿಮಳೆಗೈದಿತ್ತು. ಇನ್ನು ಪಿಎಸ್ಸಿ ರ್ಯಾಂಕ್ ವಿಜೇತರ ನಿರಂತರ ಧರಣಿ, ಪ್ರತಿಭಟನೆಗಳು ಸಹ ಸರ್ಕಾರದ ಜನಪ್ರಿಯತೆ ಕುಸಿಯಲು ಕಾರಣವಾದವು ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇಷ್ಟಾದರೂ ಬಹುಸಂಖ್ಯೆಯ ಜನತೆ ಎಲ್ಡಿಎಫ್ ಸರ್ಕಾರದ ಮೇಲೆ ಮತ್ತೊಮ್ಮೆ ಭರವಸೆ ತೋರಿಸಿ, ಎಡಪಕ್ಷಗಳಿಗೆ ತಮ್ಮ ಮತ ನೀಡಿದ್ದಾರೆ ಎಂಬುದು ಎಕ್ಸಿಟ್ ಪೋಲ್ನಲ್ಲಿ ತಿಳಿದು ಬಂದಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಾರಿ ಕೇರಳದಲ್ಲಿ ವ್ಯಾಪಕವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಆದರೂ ಎಲ್ಡಿಎಫ್ ಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್ಗೆ ಸಾಧ್ಯವಾಗದು ಎಂಬುದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ರಾಹುಲ್ ಗಾಂಧಿಯವರ ಸ್ವಕ್ಷೇತ್ರವಾದ ವಯನಾಡು ಲೋಕಸಭಾ ಕ್ಷೇತ್ರದ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಎಲ್ಡಿಎಫ್ ತೆಕ್ಕೆಗೆ ಸೇರುವ ಸಾಧ್ಯತೆಗಳಿವೆ.
ಇನ್ನು ತಿರುವನಂತಪುರದಲ್ಲಿ ಸಹ ಇದೇ ಸ್ಥಿತಿ ಇದೆ. ಈ ಕ್ಷೇತ್ರದಲ್ಲಿ 2019 ರಲ್ಲಿ ಶಶಿ ತರೂರ್ ಕಾಂಗ್ರೆಸ್ನಿಂದ ನಿರಾಯಾಸವಾಗಿ ಜಯ ಗಳಿಸಿದ್ದರು. ಇಲ್ಲಿಯೂ ಸಹ ಈ ಬಾರಿ ಎಡಪಕ್ಷಗಳ ಅಲೆ ಜೋರಾಗಿದ್ದು, ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಡಿಎಫ್ 4 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ.
ಏನೇ ಆದರೂ ಮೇ 2ನೇ ತಾರೀಕು ನಿರ್ಣಾಯಕ ದಿನವಾಗಲಿದೆ. ಪಂಚ ರಾಜ್ಯಗಳಲ್ಲಿ ಅಧಿಕಾರದಲ್ಲಿ ಉಳಿಯುವವರಾರು? ಅಧಿಕಾರ ಕಳೆದುಕೊಳ್ಳುವವರಾರು ಎಂಬುದಕ್ಕೆ ನಿಖರ ಉತ್ತರ ಅಂದೇ ಸಿಗಲಿದೆ.