ಚಂಡೀಗಢ: ಅಮರಗಢದ ಆಮ್ ಆದ್ಮಿ ಪಕ್ಷದ ಶಾಸಕ ಜಸ್ವಂತ್ ಗಜ್ಜನ್ ಮಜ್ರಾ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ 14 ಗಂಟೆಗಳ ಕಾಲ ಶೋಧ ನಡೆಸಿದೆ. ಈ ವೇಳೆ ಇಡಿ 32 ಲಕ್ಷ ರೂ. ಸೇರಿದಂತೆ ಇತರ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಇದಲ್ಲದೇ ಗಜ್ಜನ ಮಜರಾ ಹಾಗೂ ಆತನ ಸಹೋದರನ ಮೊಬೈಲ್ ಅನ್ನು ಕೂಡ ಇಡಿ ವಶಕ್ಕೆ ಪಡೆದಿದೆ. ಶಾಸಕರ ಮನೆ, ಶಾಲೆ ಮತ್ತು ಕಾರ್ಖಾನೆಯಿಂದ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಈ ನಡುವೆ ಇಡಿ ದಾಳಿ ಬಗ್ಗೆ ಶಾಸಕ ಜಸವಂತ ಗಜ್ಜನ್ ಮಜ್ರಾ ಮಾತನಾಡಿ, ನಾವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದಿದ್ದಾರೆ.
14 ಅಧಿಕಾರಿಗಳು ಶಾಸಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಶಾಸಕ ಗಜ್ಜನಮಜ್ರಾ ಹಾಗೂ ಸಹೋದರನ ಹೇಳಿಕೆಯನ್ನೂ ಇಡಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಬ್ಯಾಂಕ್ ವಂಚನೆ ಪ್ರಕರಣದ ಮೇಲೆ ಸಿಬಿಐ ದಾಳಿ: ಈ ಹಿಂದೆ ಎಎಪಿ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ಅವರ ನಿವಾಸ ಮತ್ತು ವ್ಯವಹಾರಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ಸಿಬಿಐ 94 ಸಹಿ ಮಾಡಿದ ಖಾಲಿ ಚೆಕ್, ಸುಮಾರು 16.57 ಲಕ್ಷ ನಗದು, ವಿದೇಶಿ ಕರೆನ್ಸಿ, ಆಸ್ತಿ ಪತ್ರಗಳು ಇತ್ಯಾದಿಗಳನ್ನು ವಶಕ್ಕೆ ಪಡೆದುಕೊಂಡಿತ್ತು.
1 ರೂಪಾಯಿ ಸಂಬಳದ ನಂತರ ಚರ್ಚೆಗೆ ಬಂದ ಶಾಸಕರು: ಎಎಪಿ ಶಾಸಕ ಜಸ್ವಂತ್ ಸಿಂಗ್ ಗಜ್ಜನ್ ಮಜ್ರಾ ಅವರು ಕೇವಲ 1 ರೂಪಾಯಿ ಸಂಬಳ ತೆಗೆದುಕೊಳ್ಳುವುದಾಗಿ ಘೋಷಿಸಿದ ನಂತರ ಸುದ್ದಿಯಲ್ಲಿದ್ದರು. ಪಂಜಾಬ್ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಎಂದು ಗಜ್ಜನ್ ಮಜ್ರಾ ಹೇಳಿದ್ದರು. ಹಾಗಾಗಿ ಶಾಸಕನಾಗಿ 1 ರೂಪಾಯಿ ಸಂಬಳ ತೆಗೆದುಕೊಳ್ಳುತ್ತೇನೆ ಎಂದು ಘೋಷಿಸಿದ್ದರು. ಚುನಾವಣೆಯಲ್ಲಿ ಅವರು ಶಿರೋಮಣಿ ಅಕಾಲಿದಳದ (ಅಮೃತಸರ) ಸಿಮ್ರಂಜಿತ್ ಸಿಂಗ್ ಮಾನ್ ಅವರನ್ನು ಸೋಲಿಸಿ ಶಾಸಕರಾಗಿ ಆಯ್ಕೆ ಆಗಿದ್ದರು.
ಓದಿ: ಜೈಲಿಂದ ಬಿಡುಗಡೆಯಾಗಿ 15 ದಿನದಲ್ಲೇ ಹಳೇ ಚಾಳಿ: ರೌಡಿ ಬ್ರದರ್ಸ್ ಮತ್ತೆ ಅರೆಸ್ಟ್