ಬಸ್ತಿ/ ಉತ್ತರ ಪ್ರದೇಶ : ಕಲ್ವರಿಯ ಕತ್ವಾಲಿಯಾ ಗ್ರಾಮದಿಂದ ಕಾಣೆಯಾಗಿದ್ದ 23 ವರ್ಷದ ಯುವತಿ 5 ದಿನಗಳ ಬಳಿಕ ಇಂದು ಶವವಾಗಿ ಪತ್ತೆಯಾಗಿದ್ದಾಳೆ. ನವೆಂಬರ್ 10 ರಂದು ಮನೆಯಿಂದ ಹೊರಗೆ ಹೋದವಳು ಮತ್ತೆ ಹಿಂತಿರುಗಿರಲಿಲ್ಲ. ಆಕೆಯ ಕುಟುಂಬಸ್ಥರು ಈ ಕುರಿತು ದೂರು ದಾಖಲಿಸಿದ್ದರು.
ಆದರೆ, ಇಂದು ಆ ಯುವತಿಯ ಮೃತದೇಹ ಆಕೆಯ ಮನೆಯ ಸಮೀಪವಿರುವ ಹೊಲದಲ್ಲಿ ಪತ್ತೆಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಮರಾಜ್ ಮೀನಾ ತಿಳಿಸಿದ್ದಾರೆ. ಈ ಪ್ರಕರಣ ಬಹಳ ಗಂಭಿರವಾದದ್ದು. ಆದರೆ, ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದರೂ ಎಸ್ಎಚ್ಒ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹೀಗಾಗಿ ಎಸ್ಎಚ್ಒ ಮತ್ತು ಇನ್ನೊಬ್ಬ ಪೊಲೀಸ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್ಪಿ ಹೇಮರಾಜ್ ಮೀನಾ ಮಾಹಿತಿ ನೀಡಿದ್ದಾರೆ . ಅಲ್ಲದೇ ಯುವತಿಯ ಸಾವಿನ ಪ್ರಕರಣ ಭೇದಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಪರ ಎಸ್ಪಿ ಎಸ್ಪಿ ರವೀಂದರ್ ಸಿಂಗ್ ಅವರು ತಿಳಿಸಿದ್ರು. ಇತ್ತ ಯುವತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.