ವಿಜಯಪುರ: ಹಿಂದೂ ಸಾಮ್ರಾಜ್ಯದ ಅನಭಿಷಕ್ತ ದೊರೆ, ಹಿಂದವಿ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಕುಟುಂಬ ದೇವತೆಯಾಗಿ ಆರಾಧಿಸುತ್ತಿದ್ದ ಮಾತೆ ತುಳಜಾ ಭವಾನಿ ದೇವಾಲಯವು ಮಹಾರಾಷ್ಟ್ರದ ಉಸ್ಮನಾಬಾದ್ ಜಿಲ್ಲೆಯ ತುಳಜಾಪುರದಲ್ಲಿದೆ. ಶಿವಾಜಿ ವಂಶಸ್ಥರು ಮಾತ್ರವಲ್ಲದೆ ಈ ದೇವಿಯನ್ನು ಮಹಾರಾಷ್ಟ್ರ ಹಾಗೂ ಹೊರಗಿನ ಇತರ ರಾಜ್ಯದ ಕುಟುಂಬಗಳು ಆರಾಧಿಸಿಕೊಂಡು ಬಂದಿವೆ.
ಮಹಾರಾಷ್ಟ್ರದ ಮೂರೂವರೆ ಶಕ್ತಿಪೀಠಗಳು ಮತ್ತು ಭಾರತದ ಐವತ್ತೊಂದು ಶಕ್ತಿಪೀಠಗಳಲ್ಲಿ ತುಳಜಾಭವಾನಿ ಒಂದಾಗಿದೆ. ಹೀಗೆ ತುಳಜಾಪುರದ ಭವಾನಿ ಮಾತೆಯ ದರ್ಶನಕ್ಕೆ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ, ಕಲಬುರಗಿ ಸೇರಿದಂತೆ ನೆರೆಯ ತೆಲಂಗಾಣ, ತಮಿಳುನಾಡು ಹಾಗೂ ಆಂಧ್ರದಿಂದ ಅಸಂಖ್ಯ ಭಕ್ತರು ಪಾದಯಾತ್ರೆ ಬೆಳೆಸಿದ್ದಾರೆ.
ದಸರಾ ನಿಮಿತ್ತ ಒಂಬತ್ತು ದಿನಗಳ ಕಾಲ ದೇವಿಯಯನ್ನು ಒಂಬತ್ತು ಬಗೆಯ ಅವತಾರಗಳಲ್ಲಿ ಪೂಜಿಸಿ ಮತ್ತು ಭಕ್ತಿ ಸಮರ್ಪಿಸಿದ ಬಳಿಕ, ತುಳಜಾಪುರದ ಭವಾನಿ ಮಾತೆಯ ದರ್ಶನಕ್ಕೆ ಹೋಗುವುದು ಅಸಂಖ್ಯ ಭಕ್ತರ ವಾಡಿಕೆಯಾಗಿದೆ. ಮಾರ್ಗದ ಉದ್ದಕ್ಕೂ ಕೇಸರಿ ಧ್ವಜ, ಕೇಸರಿ ಶಾಲು, ತಲೆಗೆ ರುಮಾಲು, ಪಲ್ಲಕ್ಕಿ ಹೊತ್ತು, ಕೈಯಲ್ಲಿ ನಾದಸ್ವರ ಹಿಡಿದು ಹೊರಡುವ ಭಕ್ತಸಾಗರ ಆಯಿರಾಧಾ ಉಧೇ..ಉಧೇ.. ಉಧೇ... ಸದಾನಂದಿಚಾ ಉಧೇ..ಉಧೇ.. ಉಧೇ..ಜೈ ಮಾತಾದಿ, ತುನೇ ಮುಜೆ ಬುಲಾಯಾ ಷೇರಾ ವಾಲಿಯೇ ಎಂಬ ಜೈಕಾರ ಹಾಕುತ್ತಾ ಹೋಗುವ ಸಂಪ್ರದಾಯವಿದೆ.
ದೇವಿಯ ಮಹಿಮೆ: ಮಹಾರಾಷ್ಟ್ರದ ದೇವಿಗೆ ದೇಶವಿಡೀ ಭಕ್ತರು. ಅದರಲ್ಲೂ ಕರ್ನಾಟಕದ ಭಕ್ತರದ್ದೇ ಸಿಂಹಪಾಲು. ವಿಜಯದಶಮಿಯಂದು ಕುಕ್ಕುರ ರಕ್ಕಸನ ಜೊತೆಯಲ್ಲಿ ಯುದ್ದದಲ್ಲಿ ವಿಜಯದ ಮಾಲೆ ಧರಿಸುವ ದೇವಿ. ಅದೇ ದಿನ ವಿಶ್ರಾಂತಿಗಾಗಿ ನಿದ್ರೆಗೆ ಜಾರುತ್ತಾಳೆ. ಐದು ದಿನಗಳ ಭರ್ಜರಿ ವಿಶ್ರಾಂತಿ ಬಳಿಕ ನಿದ್ರೆಯಿಂದ ಎಚ್ಚರಗೊಳ್ಳುತ್ತಾಳೆ. ಹೀಗೆ ಎಚ್ಚರಗೊಂಡಾಗ ನಡೆಯುವ ಅಭಿಷೇಕಕ್ಕೆ ಬರುವ ಭಕ್ತರು ಪಾದಯಾತ್ರೆ ಮೂಲಕ ದೇವಿಯ ದರ್ಶನ ಪಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ. ಅಭಿಷೇಕದಲ್ಲಿ ಪಾಲ್ಗೊಂಡ ಭಕ್ತರ ಬಾಳು ಬಂಗಾರವಂತೆ. ಹೀಗಾಗಿ ಭಕ್ತ ಸಾಗರವೇ ಹರಿದು ಬರುತ್ತದೆ.
ಅಲ್ಲದೇ ರಾತ್ರಿಯಲ್ಲಿ ಚಳಿಗೆ ನಡುಗುವ ಭಕ್ತರು ಆ ಭವಾನಿ ನಾಮಸ್ಮರಣೆಯಲ್ಲಿ ಆಯಿ ಭವಾನಿ ಘೋಷಣೆ ಹಾಕುತ್ತಾ ಸಾಗುತ್ತಾರೆ. ಸೊಲ್ಲಾಪುರದ ರೂಪಾಭವಾನಿ ಮಂದಿರದಿಂದ ಸಾಗುವ ಪಾದಯಾತ್ರಿಕರಿಗೆ ಮಾರ್ಗದಲ್ಲಿ ಗ್ರಾಮಸ್ಥರು, ಭಕ್ತರು ಪ್ರಸಾದ, ನೀರು, ಹಣ್ಣು ಹಂಪಲು ವಿತರಿಸುತ್ತಾರೆ.
ನಾಳೆ ಭಾನುವಾರ ಭವಾನಿ ಅಭಿಷೇಕ ನೇರವೇರಲಿದೆ. ತುಳಜಾ ಭವಾನಿ ದೇವಸ್ಥಾನ ಸುತ್ತಲೂ ಅಹಿತಕ ಘಟನೆ ಹಾಗೂ ಪಾದಯಾತ್ರಿಕರ ಸುರಕ್ಷತೆಗೆ ಮಹಾರಾಷ್ಟ್ರ ಸರ್ಕಾರ ಬಿಗಿ ಪೊಲೀಸ್ ಬಂದೋಬಸ್ತ್ ಸೇರಿದಂತೆ ಇತರ ವ್ಯವಸ್ಥೆ ಕಲ್ಪಿಸಿದೆ. ಕೊರೊನಾ ಸಂದರ್ಭದಲ್ಲಿ ಎರಡು ವರ್ಷಗಳ ಕಾಲ ಮಂದಿರಕ್ಕೆ ಪಾದಯಾತ್ರೆ ನಿರ್ಬಂಧ ಹೇರಲಾಗಿತ್ತು. ಆದರೆ, ಈ ಬಾರಿ ಕೊರೊನಾ ಹೆಮ್ಮಾರಿ ಆ ದೇವಿ ಕೃಪೆಯಿಂದ ನಾಶವಾಗಿದೆ. ಹೀಗಾಗಿ ಸಂತಸದಿಂದ, ಭಕ್ತಿಯಿಂದ ಪಾದಯಾತ್ರೆ ಮಾಡುತ್ತಿದ್ದೇವೆ ಎನ್ನುತ್ತಾರೆ ಭಕ್ತರು.
ಒಟ್ಟಿನಲ್ಲಿ ನೆಲ ಜಲ, ಭಾಷೆಯ ವಿಷಯದಲ್ಲಿ ನೆರೆ ರಾಜ್ಯದೊಂದಿಗೆ ವಿವಾದವಿದ್ದರೂ ಧಾರ್ಮಿಕ ವಿಷಯದಲ್ಲಿ ನಾವೆಲ್ಲರೂ ಭವಾನಿ ಭಕ್ತರು ಎಂಬ ಸಂದೇಶವನ್ನು ಕರ್ನಾಟಕದ ಭಕ್ತರು ಈ ಪಾದಯಾತ್ರೆ ಮೂಲಕ ಸಾಬೀತುಪಡಿಸುತ್ತಿದ್ದಾರೆ. ಜಗನ್ಮಾತೆ ತುಳಜಾಭವಾನಿ ಕೂಡಾ ಅನ್ಯ ರಾಜ್ಯದ ಭಕ್ತರನ್ನು ಹರಸಿ, ತನ್ನ ಕೃಪಾಕಟಾಕ್ಷ ತೋರಿ ಭಕ್ತರನ್ನು ರಕ್ಷಿಸುತ್ತಿದ್ದಾಳೆ ಎನ್ನುವ ನಂಬಿಕೆ ಭಕ್ತರಲ್ಲಿ ಮನೆ ಮಾಡಿದೆ.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಬ್ರಹ್ಮ ರಥೋತ್ಸವಕ್ಕೆ ಸುರಪುರ ಸಂಸ್ಥಾನದವರಿಂದ ಪ್ರಥಮ ಪೂಜೆ